ಆಲೂರು : ತಾಲೂಕಿನ ಪಾರ್ವತಮ್ಮನ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿದ್ದ ಸರ್ಕಾರಿ ಅಧಿಕಾರಿ ಸೇರಿ ಏಳು ಮಂದಿ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಬೋಸ್ಮನಹಳ್ಳಿ ಗ್ರಾಮದ ಜ್ಯೋತಿಷಿ ಮಂಜುನಾಥ್, ಹಾಸನ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ನಾರಾಯಣ, ಹಾಸನ ಗಣಪತಿ ದೇವಾಲಯ ಅರ್ಚಕ ಎಲ್. ತಿಪ್ಪೇಸ್ವಾಮಿ (ದಾವಣಗೆರೆ ಜಿಲ್ಲೆ ಕೊಡಿಕೊಪ್ಪ ಗ್ರಾಮ), ಚನ್ನರಾಯಪಟ್ಟಣ ತಾಲೂಕು ಭೂವನಹಳ್ಳಿ ವಡ್ಡರಹಟ್ಟಿಯ ಬಿ.ಎಚ್. ಜಯರಾಮ್, ಚೇತನ್, ಮಂಜುನಾಥ, ಹಾಸನ ತಾಲೂಕು ಶಂಕರನಹಳ್ಳಿಯ ಕುಮಾರ್ ಬಂಧಿತ ಆರೋಪಿಗಳು. ಜ್ಯೋತಿಷಿಯಾಗಿರುವ ಮಂಜುನಾಥ್ ನೇತೃತ್ವದಲ್ಲಿ ಕೃತ್ಯ ಎಸಗಲಾಗಿದೆ.
ಪ್ರಕರಣದ ವಿವರ:
ಲಾಕ್ಡೌನ್ ಹಿನ್ನೆಲೆಯಲ್ಲಿ ವಾರದ 2 ದಿನ ಅಂದರೆ ಸೋಮವಾರ ಹಾಗೂ ಶುಕ್ರವಾರ ಮಾತ್ರ ದೇವಾಲಯ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಕಳ್ಳರು ಗುರುವಾರ ರಾತ್ರಿ ಆಯುಧಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ನಿಧಿ ಶೋಧಕ್ಕೂ ಮುನ್ನ ಆರೋಪಿಗಳು ಹೋಮ ಹವನ ನಡೆಸಿ ಸುತ್ತಲು ಅರಶಿಣ-ಕುಂಕುಮ ಎರೆಚಿದ್ದರು. ನಂತರ ಗರ್ಭಗುಡಿ ಮುಂಭಾಗ 10 ಅಡಿ ಆಳದ ಗುಂಡಿ ತೋಡಿ ಅಲ್ಲಿ ಏನೂ ಸಿಗದ ಕಾರಣ ಹಾಗೆ ಬಿಟ್ಟು ಪರಾರಿಯಾಗಿದ್ದರು.
ಆದರೆ ಖದೀಮರ ಕೃತ್ಯದಿಂದ ದೇವರ ವಿಗ್ರಹಕ್ಕೆ ಹಾನಿಯಾಗಿದೆ.
ಶುಕ್ರವಾರ ಬೆಳಗ್ಗೆ ಅರ್ಚಕರು ದೇಗಲಕ್ಕೆ ಬಂದಾಗ ನಿಧಿಗಾಗಿ ಶೋಧ ನಡೆಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅರ್ಚಕರು ದೇಗುಲ ಸಮಿತಿಯವರಿಗೆ ವಿಷಯ ತಿಳಿಸಿ ನಂತರ ಆಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರರಕಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ 24 ಗಂಟೆಯಲ್ಲೇ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.