ಮಕ್ಕಳ,ಬಡ ರೋಗಿಗಳ ಪಾಲಿನ ಸಂಜೀವಿನಿ.
ವಿದ್ಯಾರ್ಥಿಗಳ ಪಾಲಿನ ಕಲ್ಪವೃಕ್ಷ.
ಡಾ.ರಾಜೀವ್ ರವರು ಇನ್ನಿಲ್ಲ ಎಂಬ ಸುದ್ದಿ ನಿಜವಾಗಿಯೂ ಹಾಸನ ಮತ್ತು ಸುತ್ತಮುತ್ತಲಿನ ಜನರಿಗೆ ಅತೀ ನೋವು ಮತ್ತು ನಷ್ಟವನ್ನುಂಟುಮಾಡಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಜಿಟ್ಟೇನಹಳ್ಳಿ ಗ್ರಾಮದಲ್ಲಿ ದಿವಂಗತ ಶ್ರೀ ವಿಷಕಂಠೇಗೌಡ ಮತ್ತು ದಿವಂಗತ ಶ್ರೀಮತಿ ನಂಜಮ್ಮರವರ ಪುತ್ರರಾಗಿ ಜನಿಸಿದ ಡಾಕ್ಟರ್ ರಾಜೀವ್ ಅವರು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಮುಗಿಸಿ ನಂತರ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ MD (Pediatrics) ಪದವಿ ಪಡೆದು ಕಳೆದ ಮೂವತ್ತು ವರ್ಷಗಳಿಂದ ಹಾಸನದ ಜನತೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
1985 ರಿಂದ ಮಕ್ಕಳ ತಜ್ಞರಾಗಿ ಡಾಕ್ಟರ್ ರಾಜೀವ್ ಅವರು ಸೇವೆ ಸಲ್ಲಿಸಿದ್ದರು.
1987 ರಲ್ಲಿ 100 ಹಾಸಿಗೆಯುಳ್ಳ ಸುಸಜ್ಜಿತ ರಾಜೀವ್ ನರ್ಸಿಂಗ್ ಹೋಂ ಸ್ಥಾಪಿಸಿದರು.
1999 ರಲ್ಲಿ 150 ಹಾಸಿಗೆಯುಳ್ಳ ಸುಸಜ್ಜಿತ ರಾಜೀವ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು.
ಇದರ ಜೊತೆಗೆ 1999 ರಲ್ಲಿ ರಾಜೀವ್ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿದರು. ನಂತರ 2001 ರಲ್ಲಿ ರಾಜೀವ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಆರಂಭಿಸಿದರು.
![](https://hassananews.com/wp-content/uploads/2020/09/unnamed-5434694819678540984.-1.jpg)
ಜೊತೆಗೆ ರಾಜೀವ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಸುಮಾರು ಒಂಭತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು.
ಕೇವಲ ಹಣಕ್ಕಾಗಿ ವೈದ್ಯಕೀಯ ಸೇವೆ ಮತ್ತು ಶಿಕ್ಷಣ ನೀಡುವುದನ್ನು ಮಾಡದೆ ಬಡರೋಗಿಗಳು ಮತ್ತು ಬಡ ವಿದ್ಯಾರ್ಥಿಗಳಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು.
ಇವೆಲ್ಲದರ ಜೊತೆಗೆ ಸುಮಾರು ಸಾಮಾಜಿಕ ಕಾರ್ಯಗಳನ್ನು ತುಂಬಾ ಕಳಕಳಿಯಿಂದ ನಡೆಸಿಕೊಂಡು ಬರುತ್ತಿದ್ದರು.
120 ಕ್ಕೂ ಹೆಚ್ಚು ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದರು.
50 ಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸಿದ್ದರು.
ಸಾವಿರಾರು ಬಡಜನರಿಗೆ ಮತ್ತು ಬಡ ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ಒದಗಿಸಿದರು.
ಜೊತೆಗೆ ಸಾವಿರಾರು ಬಡ ಮಕ್ಕಳಿಗೆ ಮತ್ತು ಉಜ್ವಲ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಸಹ ನೀಡಿದ್ದರು.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆಸಿದ್ದರು.
![](https://hassananews.com/wp-content/uploads/2020/09/images-217958489066813191516..jpg)
ಕಳೆದ ನಾಲ್ಕು ವರ್ಷದಿಂದ ಪ್ರತಿವರ್ಷ 1500 ಕ್ಕೂ ಹೆಚ್ಚು ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದರು.
ಹೀಗೆ ತಮ್ಮದೇ ಆದ ರೀತಿಯಲ್ಲಿ ಬಡರೋಗಿಗಳಿಗೆ,ಬಡ ವಿದ್ಯಾರ್ಥಿಗಳಿಗೆ, ಸಾಮಾನ್ಯ ಜನರಿಗೆ, ಪರಿಸರಕ್ಕೆ,ಸಮಾಜಕ್ಕೆ ತಮ್ಮ ಸೇವೆಯನ್ನು ಕಳೆದ 35 ವರ್ಷಗಳಿಂದ ಡಾಕ್ಟರ್ ರಾಜೀವ್ ರವರು ಸಲ್ಲಿಸಿದ್ದಾರೆ. ಇದರ ಜೊತೆಗೆ ಡಿಸ್ಟಿಕ್ ರಿಪಬ್ಲಿಕ್ ಅವಾರ್ಡ್, ಪರಿಸರ ಪ್ರಶಸ್ತಿ,ಉತ್ತಮ ವೈದ್ಯ ಪ್ರಶಸ್ತಿ ಜೊತೆಗೆ 60 ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳಿಂದ ಪ್ರಶಸ್ತಿಗಳು ಬಂದಿವೆ.
ಹೀಗೆ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಾಸನ ಜಿಲ್ಲೆಗೆ ಡಾಕ್ಟರ್ ರಾಜೀವ್ ರವರ ಕೊಡುಗೆ ಅಪಾರ.
ಇಂದು ದುರದೃಷ್ಟವಶಾತ್ ನಾವು ಇವರನ್ನು ಕಳೆದುಕೊಂಡಿದ್ದೇವೆ. ಕಳೆದ ಒಂದು ವಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ರಾಜೀವ್ ರವರು ಇಂದು ಕೊನೆಯುಸಿರೆಳೆದಿದ್ದಾರೆ.
ದೇವರು ಇವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ..