ವಿಜಯೇಂದ್ರ ಸೂಪರ್ ಸಿಎಂ ಅಲ್ಲ- ಮುಂದೊಂದು ದಿನ ಸಿಎಂ ಆಗ್ತಾರೆ,ಈಗ ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ: ಶಾಸಕ ಪ್ರೀತಮ್ ಗೌಡ
ಹಾಸನ: ವಿಜಯೇಂದ್ರರವರು ಸೂಪರ್ ಸಿಎಂ ಅಲ್ಲ ಮುಂದೊಂದು ದಿವಸ ಸಿಎಂ ಆಗುತ್ತಾರೆ. ಬಿ.ಎಸ್. ಯಡಿಯೂರಪ್ಪನವರು ಪೂರ್ಣವಧಿಗೆ ಮುಖ್ಯಮಂತ್ರಿಯಾಗಿ ಉಳಿಯಲಿದ್ದು, ಮುಂದಿನ ಚುನಾವಣೆಗೆ ಅವರ ನಾಯಕತ್ವವಹಿಸಲಿದ್ದಾರೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರವರು ಭವಿಷ್ಯ ನುಡಿದರು.
![](https://hassananews.com/wp-content/uploads/2020/09/screenshot_20200918-1738473480245318155988629.jpg)
ನಗರದ ಮೆಡಿಕಲ್ ಕಾಲೇಜು ಆವರಣದಲ್ಲಿ ಬಿಜೆಪಿ ನಗರ ಮಂಡಲವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ರವರು ಬೆಳೆಯುತ್ತಿರುವುದನ್ನು ನೋಡಿ ಹೀಗೆ ಮಾತನಾಡುತ್ತಿದ್ದಾರೆ. ಅವರ ಪ್ರಭಾವ ಇಂದು ಹೆಚ್ಚಾಗಿದೆ. ರಾಜ್ಯದ ನಾಯಕತ್ವವಹಿಸಿಕೊಳ್ಳಲು ಮುಂದಾಳತ್ವದಲ್ಲಿ ಬರುತ್ತಿದ್ದಾರೆ. ಅವರು ಬೆಳೆಯುತ್ತಿದ್ದಾರೆ ಎಂದು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ವಿಜಯೇಂದ್ರರವರು ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಮತ್ತು ಯೋಗ್ಯತೆಯನ್ನು ಅವರು ಇಟ್ಟುಕೊಂಡಿರುವುದರಿಂದ ಸೂಪರ್ ಸಿಎಂ ಅಲ್ಲ ಮುಂದೊಂದು ದಿನ ಸಿಎಂ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೀಗೋಂದು ಭವಿಷ್ಯ ನುಡಿದರು.
ಸೂರ್ಯ ಚಂದ್ರನ್ನು ನಾವು ಕಾಣುತ್ತಿರುವುದು ಎಷ್ಟು ಸತ್ಯವೊ ಅಷ್ಟೆ ಬಿ.ಎಸ್. ಯಡಿಯೂರಪ್ಪರವರು ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುವುದು ಸತ್ಯ. ಮುಂದಿನ ಚುನಾವಣೆಯೂ ಕೂಡ ಅವರ ನೇತೃತ್ವದಲ್ಲಿ ನಡೆಯುತ್ತೆ. ನಾನು ಹೇಳುವ ಭವಿಷ್ಯ ನಿಜವಾಗುತ್ತೆ ಎಂದು ಮಾಧ್ಯಮಕ್ಕೆ ಹೀಗೊಂದು ಸಂದೇಶ ನೀಡಿದರು.
ಕರ್ತವ್ಯ ನಿರತ ಮಾಧ್ಯಮದ ಸ್ನೇಹಿತರು ಸಿಎಂ ಬಗ್ಗೆ ಆರೋಗ್ಯಕರವಾಗಿ ಚರ್ಚೆ ಮಾಡುತ್ತಿದ್ದಾರೆ ಅಷ್ಟೇ. ಈ ರೀತಿಯ ಚರ್ಚೆಯಿಂದ ಯಾರಿಗೆ ಖುಷಿಯಾಗುತ್ತೋ ಅದನ್ನು ಅವರೇ ಹುಟ್ಟು ಹಾಕಿದ್ದಾರೆ. ಆದರೆ ಆ ಚರ್ಚೆಗೆ ಪ್ರೋತ್ಸಾಹ ಕೊಡಲು ಒಬ್ಬರೂ ಶಾಸಕರಿರುವುದಿಲ್ಲ. ಎಲ್ಲ ಶಾಸಕರು ಮುಖ್ಯಮಂತ್ರಿಯವರ ಹಿಂದೆ ಇರುತ್ತೇವೆ ಎಂದರು.
ಸಿಎಂ ದೆಹಲಿಗೆ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದಿಂದ ಹಣ ತರುವ ಯೋಜನೆಯನ್ನಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೆಹಲಿಗೆ ಹೋಗಿದ್ದಾರೆ ಎಂದರು. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೀತಿ ಆಗಿತ್ತು. ಇನ್ನು ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಎಂದು ಕೇಳಿಲ್ಲ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೇನೆ. ಸಿಎಂ ಮತ್ತು ರಾಜ್ಯಾಧ್ಯಕ್ಷರು ಏನು ಹೇಳುತ್ತಾರೆ ಅಷ್ಟೆ ನನ್ನ ಕೆಲಸ. ಮುಖ್ಯಮಂತ್ರಿಗಳು ಇಂದು ಶನಿವಾರ ದೆಹಲಿಯಿಂದ ವಾಪಸ್ ಬರುತ್ತಾರೆ. ನಂತರದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ತಿಳಿಯಲಿದೆ ಎಂದು ಉತ್ತರಿಸಿದರು.