ಹಾಸನ: ಆಲೂರು ತಾಲೂಕಿನ ಕಾರ್ಜುವಳ್ಳಿಯ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ(50) ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಜುವಳ್ಳಿ ಹಿರೇಮಠದ ನಿವಾಸದಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ ಕೋಣೆಯತ್ತ ತೆರಳಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಶ್ರೀಗಳ ಮೃತದೇಹದ ಪಕ್ಕ ಡೆತ್ನೋಟ್ ಸಿಕ್ಕಿದೆ.
ಶ್ರೀಗಳು ಕಾರವಾರ ಮೂಲದವರು. ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ 2006ನೇ ಇಸವಿಯಿಂದ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾಗಿದ್ದರು. 15 ಎಕರೆ ಪಾಳುಭೂಮಿಯಲ್ಲಿ ಮಠವನ್ನು ಅಭಿವೃದ್ಧಿ ಮಾಡಿದ್ದರು.
ಶ್ರೀಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ಕಾರಣ ನಿಗೂಢವಾಗಿದೆ. ಆದರೆ, ಮೃತದೇಹದ ಪಕ್ಕವೇ ಚೇಟಿಯೊಂದು ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ’ ಎಂಬ ಬರಹ ಮತ್ತು ಸಹಿ ಕೂಡ ಇದೆ. ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಠದ ಬಳಿ ಭಕ್ತವೃಂದ ಜಮಾಯಿಸಿದ್ದರು.