ಅ 28 ರಿಂದ ಹಾಸನಾಂಬ ದರ್ಶನೋತ್ಸವ: ಸರಳ ಆಚರಣೆಗೆ ನಿರ್ಧಾರ

0

ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಅ.28 ರಿಂದ ನ.06 ರವರೆಗೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರ ದಸರಾ ಆಚರಣೆಯ ಮಾರ್ಗ ಸೂಚಿಯನ್ನು ಪ್ರಕಟಿಸಿದ್ದು, ಜೊತೆಗೆ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಸೋಂಕಿನ ದರ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯೂ ಸಹ ಹಾಸನಾಂಬ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ನಗರದಲ್ಲಿ ದೀಪಾಲಂಕಾರ ಹಾಗೂ ಪುಷ್ಪಲಂಕಾರ ವ್ಯವಸ್ಥೆ ಮಾಡಲಾಗುತ್ತದ್ದೆ ವಿಶೇಷ ಪೂಜೆ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಕಳೆದ ಬಾರಿಯಂತೆ ನಗರದ 7-8 ಕಡೆ ಎಲ್ ಇಡಿ ದೊಡ್ಡ ಪರದೆ ಅಳವಡಿಸುವ ಮೂಲಕ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು .

ನಗರದಲ್ಲಿ ಅಲ್ಲಲ್ಲಿ ಎಲ್.ಇ.ಡಿ ಪರದೆ ಅಳವಡಿಸಿ ಸಾರ್ವಜನಿಕರಗೆ ಅನುಕೂಲ ಕಲ್ಪಿಸಲಾಗುವುದು. ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರಗಳು, ಉತ್ಸವ ಕುರಿತ ಪ್ಲೆಕ್ಸ್ ಹಾಕಲಾಗುವುದು ಎಂದರು.

ಹಾಸನಾಂಬ ಉತ್ಸವಕ್ಕೆ ಚಾಲನೆ ನೀಡಲು ಈ ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರನ್ನು ಆಹ್ವಾನಿಸಲಾಗುವುದು ಎಂದರು.

ಅ.28 ರಿಂದ ನ.06 ರವರೆಗೆ 10 ದಿನ ಹಾಸನಾಂಬ ದೇವಿಯ ಪೂಜೆ ವಿಧಿ ವಿಧಾನಗಳನ್ನು ಆನ್‍ಲೈನ್ ಮೂಲಕ ಪ್ರಸಾರ ಮಾಡಲು ತಿರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು.

ಹಾಸನಾಂಬ ಉತ್ಸವದಲ್ಲಿ ಯಾವುದೇ ಸಂಪ್ರದಾಯಗಳು, ಆಚರಣೆಗಳು ಮತ್ತು ವಿಜೃಂಭಣೆಗೆ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ನಾಲ್ಕು ದಿನಗಳ ಹಿಂದೆ 0.90 ಇದ್ದು ಇದೀಗ 1.27 ಕ್ಕೆ ಏರಿಕೆಯಾಗಿದೆ. ಆದ್ದರಿಂದ ಹಾಸನಾಂಬ ಉತ್ಸವ ಸರಳವಾಗಿ ಆಚರಿಸುವುದು ಉತ್ತಮ ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಪ್ರೀತಮ್ ಜೆ ಗೌಡ, ಸಿ.ಎನ್. ಬಾಲಕೃಷ್ಣ ಕೆ.ಎಸ್ ಲಿಂಗೇಶ್, ಅವರು ಅಭಿಪ್ರಾಯಗಳನ್ನು ತಿಳಿಸಿ, ಸಲಹೆಗಳನ್ನು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್, ಡಿ.ಎಚ್.ಒ ಡಾ||ಸತೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here