ಹಾಸನ : (ಹಾಸನ್_ನ್ಯೂಸ್ !, ಮಾ.24 !, ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಆರ್.ಟಿ.ಪಿ.ಸಿ.ಆರ್ ತಪಾಸಣೆ ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಪ್ರತಿ ಕೋವಿಡ್ ಸೋಂಕಿತರ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಆರೋಗ್ಯ ವಿಚಾರಿಸುವುದರ ಜೊತೆಗೆ ಅವರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಹೆಚ್ಚಿನ ನಿಗಾವಹಿಸುವಂತೆ ಅವರು ಹೇಳಿದರು.
ವಿವಾಹ ಹಾಗೂ ಸಭೆ ಸಮಾರಂಭದಲ್ಲಿ ಜನಸಂದಣಿ ಸೀಮಿತಗೊಳಿಸಿ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಕಲ್ಯಾಣ ಮಂದಿರಗಳಲ್ಲಿ ಮಾರ್ಷಲ್ಗಳನ್ನು ಇರಿಸಿ, ಹೆಚ್ಚಿನ ಜನ ಸೇರದಂತೆ ನಿಗಾವಹಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
![](https://hassananews.com/wp-content/uploads/2021/03/vijaya-karnataka-1-1-1024x768.jpg)
ಸಂತೆಗಳಲ್ಲಿಯೂ ಕೋವಿಡ್ ನಿಯಂತ್ರಣಕ್ಕಾಗಿ, ವಿಶೇಷ ಗಮನ ಹರಿಸಬೇಕು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು, ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ಜಾತ್ರೆಗಳಲ್ಲಿ ಜನಸಂಖ್ಯೆ ಪಾಲ್ಗೊಳ್ಳುವಿಕೆಗೆ ಮಿತಿ ಹೇರಬೇಕು ಎಂದು ನವೀನ್ ರಾಜ್ ಸಿಂಗ್ ನಿರ್ದೇಶನ ನೀಡಿದರು.
ಮುಂಬೈ ಹಾಗೂ ಕೇರಳದಿಂದ ಬಸ್ ಹಾಗೂ ರೈಲು ಮಾರ್ಗವಾಗಿ ಬರುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೊಳಪಡಿಸಿ ಆರ್. ಟಿ. ಪಿ. ಸಿ. ಆರ್ ಪರೀಕ್ಷೆ ನಡೆಸಿ ಎಂದು ಅವರು ತಿಳಿಸಿದರು.
ಹಿಮ್ಸ್ ನಲ್ಲಿ 200 ಬೆಡ್ಗಳಿರುವ ವಾರ್ಡ್ಗಳು ಹಾಗೂ 25 ಐ. ಸಿ. ಯು ಬೆಡ್ಗಳನ್ನು ಕೋವಿಡ್ ಗೆ ಮೀಸಲಿರಿಸಬೇಕು ಅದೇ ರೀತಿ ತಾಲ್ಲೂಕು ಆಸ್ಪತ್ರೆಗಳಲ್ಲಿ 50 ಬೆಡ್ಗಳ ವಾರ್ಡ್ ಮತ್ತು ಐ.ಸಿ.ಯು ಬೆಡ್ ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಿ ಎಲ್ಲಾ ಆಸ್ಪತ್ರೆಗಳು ಸುಸಜ್ಜಿತವಾಗಿರಬೇಕು, ಆಮ್ಲಜನಕ ಪೂರೈಕೆ ಬಗ್ಗೆ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಜಾಗೃತಿ ಚಟುವಟಿಕೆಗಳನ್ನು ಚುರುಕು ಮಾಡಿ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಿ ಎಂದರು. ನಗರ ವ್ಯಾಪ್ತಿಯಲ್ಲಿಯೂ ಹೆದ್ದಾರಿ ಫಲಕ ಅಳವಡಿಸಿ ಅರಿವು ಮೂಡಿಸಿ ಎಂದು ಅವರು ತಿಳಿಸಿದರು.
ಮೊದಲು ಹಾಸನ ನಗರದಲ್ಲಿರುವ ಆಯುಷ್ ಆಸ್ಪತ್ರೆಯನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಬಳಸಿ ಅಲ್ಲದೆ ಎರಡು ತಿಂಗಳು ಯಾವುದೇ ತರಬೇತಿಗಳನ್ನು ನಡಸದೆ ಜಿಲ್ಲಾ ತರಬೇತಿ ಕೇಂದ್ರ ಹಾಗೂ ಜಿಲ್ಲೆಯ ಸಂಪರ್ಕ ಕೇಂದ್ರಗಳನ್ನು ಬಳಸಿ 100 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಿ ಎಂದು ನವೀನ್ ರಾಜ್ ಸಿಂಗ್ ಅವರು ಹೇಳಿದರು.
![](https://hassananews.com/wp-content/uploads/2021/03/FB_IMG_1616553250657-1024x472.jpg)
ಜಿಲ್ಲೆಯಲ್ಲಿ ಈವರೆಗೆ 60 ವರ್ಷ ಮೇಲ್ಪಟ್ಟವರು 48562 ಮಂದಿಗೆ ಹಾಗೂ ಕೋಮ್ ಅರ್ಬಿಡಿಟಿ ಇರುವ 45 ವರ್ಷ ಮೇಲ್ಪಟ್ಟವರಿಗೆ ಕೋಮ ಅರ್ಬಿಡಿಟಿ ಇರುವ 4590 ಮಂದಿಗೆ ಲಸಿಕೆ ಹಾಕಲಾಗಿದ್ದು, ಅಗತ್ಯ ಪ್ರಮಾಣದ ಲಸಿಕೆಯನ್ನು ಬೆಂಗಳೂರಿನಿಂದ ತರಿಸಿ ಕೊಳ್ಳುವಂತೆ ಅವರು ಸೂಚನೆ ನೀಡಿದರು.
ಕೋವಿಡ್ ಲಸಿಕಾ ಕಾರ್ಯ ಚುರುಕುಗೊಳಿಸಬೇಕು ಮುಂದಿನ 7 ದಿನಗಳ ಒಳಗಾಗಿ ಶೇಕಡ 80 ರಷ್ಟು ಗುರಿ ಸಾಧನೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಬಿ.ಎಲ್.ಓ ಗಳಿಗೆ ಆಶಾ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ಭೇಟಿ ನೀಡಿ 60 ವರ್ಷ ಮೇಲ್ಪಟ್ಟವರು ಹಾಗೂ 40 ವರ್ಷ ಮೇಲ್ಪಟ್ಟ ಕೋಮ್ ಅರ್ಬಿಡಿಟಿ ಸ್ಥಿತಿಯಲ್ಲಿರುವವರನ್ನು ಗುರುತಿಸಿ ಲಸಿಕೆ ಪಡೆಯುವಂತೆ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಲಸಿಕೆ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎನ್.ಡಿ.ಆರ್.ಎಫ್ ನಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸೌಲಭ್ಯ, ಸೇವೆಗಳು ಹಾಗೂ ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ಆರ್ ಗಿರೀಶ್ ಹೇಳಿದರು.
ಇದೇ ವೇಳೆ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳ ಯಾವುದೇ ಕೊರತೆಯಾಗದಂತೆ ಗಮನಹರಿಸಿ ಅರ್ಹ ರೈತರು ಫ್ರೂಟ್ಸ್ ಐಡಿ ಪಡೆಯುವಂತೆ ಕ್ರಮವಹಿಸಿ ಎಂದು ನವೀನ್ ರಾಜ್ ಸಿಂಗ್ ಹೇಳಿದರು.
ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಅಂಕಿ ಅಂಶಗಳ ನೋಟ 2019 ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಹಾಗೂ ಜಾಗೃತಿ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ||ಕೃಷ್ಣಮೂರ್ತಿ ಹಾಗೂ ಮತ್ತಿತರರು ಹಾಜರಿದ್ದರು.
![](https://hassananews.com/wp-content/uploads/2021/03/PicsArt_03-24-08.16.35-1024x1024.jpg)