ಪ್ರತಿ ಬ್ಯಾಂಕ್‍ಗಳು ಕನಿಷ್ಠ ಹಾಸನದ 5 ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಬೇರೆ ಉದ್ಯಮಿಗಳು ಸ್ಫೂರ್ತಿ ಪಡೆಯುವ ಕೆಲಸ ಆಗಬೇಕು – ಜಿಲ್ಲಾಧಿಕಾರಿ

0

ಹಾಸನ ಅ.26 : ಗ್ರಾಹಕರಿಗೆ ಬ್ಯಾಂಕಿನ ವ್ಯವಹಾರಗಳ ಬಗ್ಗೆ  ಸೂಕ್ತ ಮಾರ್ಗದರ್ಶನ ನೀಡಿ ಸಾಲ ಸೌಲಭ್ಯ ಒದಗಿಸುವಂತೆ ಶಾಸಕರಾದ ಪ್ರೀತಮ್ ಜೆ. ಗೌಡ ಅವರು ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
  ನಗರದ ಜ್ಞಾನಾಕ್ಷಿ ಕನ್ವೆನ್ಷನ್ ಸೆಂಟರ್‍ನಲ್ಲಿಂದು ಜಿಲ್ಲಾ ಮಟ್ಟದ ಬ್ಯಾಂಕ್‍ಗಳ ಸಮಿತಿ, ಜಿಲ್ಲಾ ಸದಸ್ಯ ಬ್ಯಾಂಕ್‍ಗಳ ವತಿಯಿಂದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಮಾಣಿಕವಾಗಿ ಸಾಲ ಸೌಲಭ್ಯ ಅವಶ್ಯಕತೆ ಇರುವವರಿಗೆ ಸಹಾಯ ಮಾಡಿದರೆ ಗ್ರಾಹಕರು ಉತ್ತಮ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸರಿಯಾದ ಪ್ರತಿಕ್ರಿಯೆ ನೀಡಿ ಮಾಹಿತಿ ಒದಗಿಸುವಂತೆ ತಿಳಿಸಿದ ಅವರು ಅರ್ಹರಿಗೆ ಬ್ಯಾಂಕುಗಳು  ದಾರಿ ದೀಪವಾಗಲಿ ಎಂದು ಆಶಿಸಿದರು.

ಪ್ರತಿ ಬ್ಯಾಂಕ್‍ಗಳು ಕನಿಷ್ಠ 5 ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಬೇರೆ ಉದ್ಯಮಿಗಳು ಸ್ಫೂರ್ತಿ ಪಡೆಯುವ  ಕೆಲಸ ಆಗಬೇಕು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ದೇಶದ ಒಟ್ಟಾರೆ ಉತ್ಪನ್ನದಲ್ಲಿ  ಶೇ.20 ರಷ್ಟು ಕೃಷಿಗೆ, ಶೇ.30 ರಷ್ಟು ಕೈಗಾರಿಕೆ, ಇನ್ನುಳಿದ ಶೇ.60 ರಷ್ಟು ಇತರೆ ಭಾಗದಿಂದ ದೊರೆಯುತ್ತಿದ್ದು, ಆಧುನಿಕ ಯುಗದಲ್ಲಿ ಉದ್ದಿಮೆಗಳಲ್ಲಿ ಹೊಸ  ಆವಿಷ್ಕಾರಗಳನ್ನು ಮಾಡುವುದರ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಹಲವಾರು ಆಕರ್ಷಕ ಸಾಲ ಸೌಲಭ್ಯ ಯೋಜನೆಗಳು ಬ್ಯಾಂಕುಗಳಿಂದ ದೊರೆಯುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರಲ್ಲದೆ ಕೆಲವು ಸಂದರ್ಭದಲ್ಲಿ ಬ್ಯಾಂಕುಗಳು ದಿವಾಳಿಯಾಗಿರುವ ಪರಿಸ್ಥಿತಿ ಎದುರಾಗಿದ್ದು, ಗ್ರಾಹಕರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವಂತೆ ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಸರ್ಕಾರದಿಂದ ಹತ್ತು ಸಾವಿರ ಕೋಟಿಯನ್ನು ಬೇರೆ ಬೇರೆ ಯೋಜನೆಗಳಿಗೆ ಬಿಡುಗಡೆ ಮಾಡಿದ್ದು, ಕೃಷಿಗೆ 6 ಸಾವಿರ ಕೋಟಿ, ತೋಟಗಾರಿಕೆಗೆ 1400  ಕೋಟಿ ಹಾಗೂ ಇತರೆ 1000 ಕೋಟಿ ಹಣವನ್ನು ಕಾಯ್ದಿರಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಎಲ್ಲಾ ಬ್ಯಾಂಕಿನ  ಮುಂಭಾಗದಲ್ಲಿ  ಸಾರ್ವಜನಿಕರಿಗೆ ದೊರೆಯಬಹುದಾದ  ಸಾಲ ಸೌಲಭ್ಯ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಪ್ರದರ್ಶಿಸುವಂತೆ ತಿಳಿಸಿದರು.

ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ಯೋಗೇಶ್ ಬಿ. ಆಚಾರ್ಯ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ಸ್ಟಾಲ್‍ಗಳ ಉದ್ಘಾಟನೆ ಮಾಡುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸಾಲಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೆಚ್.ಡಿ.ಸಿ.ಸಿ ಬ್ಯಾಂಕ್‍ನ ಅಧ್ಯಕ್ಷರಾದ ಸೋಮನಹಳ್ಳಿ  ನಾಗರಾಜು, ನಬಾರ್ಡ್‍ನ  ವ್ಯವಸ್ಥಾಪಕರಾದ ಮಾಲಿನಿ ಸುವರ್ಣ, ಲೀಡ್ ಬ್ಯಾಂಕ್‍ನ  ವ್ಯವಸ್ಥಾಪಕರಾದ ರೇವತಿ ಸುಧಾಕರ್, ಸಹಾಯಕ ಮಹಾಪ್ರಬಂಧಕರಾದ ಸುನಿಲ್ ಕುಮಾರ್, ಡಿ.ಸಿ.ಸಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್, ಎಸ್.ಬಿ.ಎಂನ ವ್ಯವಸ್ಥಾಪಕರಾದ ಶ್ರೀಪತಿ, ಎಲ್ಲಾ ಸಹಾಯಕ ಬ್ಯಾಂಕ್‍ಗಳ ವ್ಯವಸ್ಥಾಪಕರು ಹಾಜರಿದ್ದರು.

LEAVE A REPLY

Please enter your comment!
Please enter your name here