ಮುಂದಿನ ಅಧಿವೇಶನದಲ್ಲಿ ಪ್ರಜ್ವಲ್ ಭಾಗವಹಿಸುವಂತಿಲ್ಲ ; ರಾಜಕೀಯವಾಗಿ ಮುಗಿಸುವರೆಗೂ ಬ್ರಹ್ಮ ಬಂದ್ರು ಕಾನೂನು ಹೋರಾಟ ನಿಲ್ಲಿಸಲ್ಲ: ಜಿ. ದೇವರಾಜೇಗೌಡ

0

ಹಾಸನ : ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುವವರೆಗೂ ಪಾರ್ಲಿಮೆಂಟ್‌ನಲ್ಲಿ ಪ್ರಜ್ವಲ್ ರೇವಣ್ಣ ಭಾಗವಹಿಸುವಾಗಿಲ್ಲ. ನನ್ನಿಂದ ವಿಚ್ಛೇದನ ಪಡೆದ ಮಹಿಳೆಯನ್ನು ಕರೆದುಕೊಂಡು ಹೇಳಿಕೆ ನೀಡಿರುವವರನ್ನು ರಾಜಕೀಯವಾಗಿ ಮುಗಿಸುವವರೆಗೂ ಆ ಬ್ರಹ್ಮ ಬಂದರೂ ನಾನು ಕಾನೂನು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಕೀಲರಾದ ಜಿ. ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನೀಡಿರುವ ತೀರ್ಪುನ್ನು ಅಮಾನತು ಮಾಡುವಂತೆ ಪ್ರಜ್ವಲ್‌ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದು, ಇದರ ವಿರುದ್ಧ ನಾವು ತಕರಾರು ಸಲ್ಲಿಸಿದ್ದೆವು.

ಯಾರೆ ಆಗಲಿ ನ್ಯಾಯಾಲಯವನ್ನು ಗೌರವವಾಗಿ ಕಾಣಬೇಕು. ಸಮಯಕ್ಕೆ ತಕ್ಕಂತೆ ಆ ಕೆಲಸ ಮಾಡಿದರೆ ಬೆಲೆ ಬರುತ್ತದೆ ಎಂದು ನ್ಯಾಯಾಲಯವು ತೀರ್ಪು ಕೊಟ್ಟಿರುವುದೇ ಸಾಕ್ಷಿ. ಪ್ರಜ್ವಲ್‌ರೇವಣ್ಣರವರ ಸಂಸದ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ದಿನವೇ ಅವರು ಅರ್ಜಿ ಹಾಕಬೇಕಿತ್ತು. ಅವರು ಆ ದಿನ ಅರ್ಜಿ ಹಾಕಲಿಲ್ಲ. ತಾಂತ್ರಿಕ ಕಾರಣಗಳನ್ನು ನೀಡಿ ನಾಲ್ಕು ದಿನ ತಡವಾಗಿ ಅರ್ಜಿ ಹಾಕಿದರು. ಎ.ಮಂಜು ಅವರು ಪ್ರಜ್ವಲ್ ಸದಸ್ಯತ್ವ ಅನರ್ಹಗೊಳಿಸುವವಂತೆ ಅರ್ಜಿ ಹಾಕಿದ್ದರು.

ನ್ಯಾಯಾಲಯವನ್ನು ಹಗುರವಾಗಿ ಕಾಣದಂತೆ ಇವತ್ತು ತೋರಿಸಿಕೊಟ್ಟಿದ್ದು, ಸತ್ಯಕ್ಕೆ ಸಿಕ್ಕ ಜಯ ಎಂದು ಹೇಳುತ್ತೇನೆ ಎಂದರು. ಅಧಿಕಾರದ ಅಹಂ, ನಾನತ್ವ ಎಂಬ ಭಾವನೆಯಿಂದ ನ್ಯಾಯಾಲಯವನ್ನು ಕಡೆಗಣಿಸಿದ್ರು ಎನ್ನುವುದಕ್ಕೆ ಇದು ಪ್ರತ್ಯೆಕ್ಷ ಸಾಕ್ಷಿ. ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುವವರೆಗೂ ಪಾರ್ಲಿಮೆಂಟ್‌ನಲ್ಲಿ ಪ್ರಜ್ವಲ್ ಭಾಗಿಯಾಗುವಂತಿಲ್ಲ. ಈಗಾಗಲೇ ಚುನಾವಣಾ ಆಯೋಗ, ಲೋಕಸಭಾ ಸ್ಪೀಕರ್, ವಿಧಾನಸಭೆ ಸ್ಪೀಕರ್ ಎಲ್ಲಾ ದಾಖಲೆ ನೀಡಿ ಪ್ರಕ್ರಿಯೆಗಳನ್ನು ಪೂರ್ತಿ ಮಾಡಿದ್ದೇವೆ. ಸೆಪ್ಟಂಬರ್ ೧೮ ಮತ್ತು ೧೯ ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಪ್ರಜ್ವಲ್‌ ರೇವಣ್ಣ ಭಾಗವಹಿಸುವಂತಿಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಈಗಾಗಲೇ ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯೆಟ್ ಫೈಲ್ ಮಾಡಿದ್ದೇನೆ.

ಅವರು ಎಸ್‌ಎಲ್‌ಪಿ ಫೈಲ್ ಮಾಡಿದ್ರು. ನಮ್ಮ ಕೌನ್ಸಿಲ್‌ಗೆ ಎಲ್ಲಾ ಪ್ರತಿ ನೀಡಬೇಕು. ನಾವು ಅದಕ್ಕೆ ಆಕ್ಷೇಪಣೆ ಸಲ್ಲಿಸಿದ ನಂತರ ವಿಚಾರಣೆಗೆ ಬರುತ್ತದೆ. ಅಲ್ಲಿಯವರೆಗೂ ವಿಚಾರಣೆಗೆ ಬರಲ್ಲ ಎಂದು ಹೇಳಿದರು. ಆ ಬ್ರಹ್ಮ ಬಂದರು ನಾನು ಕಾನೂನು ಹೋರಾಟ ನಿಲ್ಲಿಸುವುದಿಲ್ಲ. ಈಗಾಗಲೇ ರೇವಣ್ಣ ಅವರು ನನ್ನ ವಿರುದ್ಧ ಮಾತನಾಡಲು ಒಬ್ಬ ಮಹಿಳೆಯನ್ನು ತಂದು ನಿಲ್ಲಿಸಿದ್ದಾರೆ. ನಾನು ದೆಹಲಿಗೆ ಹೋಗಿ ಬರುವುದರಲ್ಲಿ ಇನ್ನೂ ನಾಲ್ಕೈದು ಮಹಿಳೆಯರನ್ನು ಕರೆದುಕೊಂಡು ಬಂದು ನಿಲ್ಲಿಸಲಿ. ಅವರು ಯಾವ ಅಡ್ಡದಾರಿಯಲ್ಲಿ ಹೋದರೂ ದೇವರಾಜೇಗೌಡ ರಾಜಿ ಆಗಲ್ಲ ಎಂದು ಕಡಕ್ ತಿಳಿಸಿದರು. ಅವರನ್ನು ರಾಜಕೀಯವಾಗಿ ಸಂಪೂರ್ಣವಾಗಿ ಕಿತ್ತು ಹಾಕುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. ರೇವಣ್ಣ ಅವರ ಕುಟುಂಬವನ್ನು ರಾಜಕೀಯವಾಗಿ ತೆಗೆಯಬೇಕು.

ಅವರು ಏನೇನ್ ಮಾಡಿದ್ದಾರೆ ಅದನ್ನೆಲ್ಲಾ ಕಾನೂನು ಚೌಕಟ್ಟಿನಲ್ಲಿ ತೆಗೆಯುತ್ತೇನೆ. ಅವರು ನನ್ನ ವಿರುದ್ಧ ನೂರಾರು ಆರೋಪಗಳನ್ನು ಮಾಡಿಸುತ್ತಿದ್ದಾರೆ. ಅದರಲ್ಲಿ ನನ್ನಿಂದ ವಿಚ್ಛೇದನ ಪಡೆದ ಮಹಿಳೆಯನ್ನು ಕರೆದುಕೊಂಡು ಪ್ರೆಸ್‌ಮೀಟ್ ಮಾಡಿಸಿದ್ದಾರೆ. ಈತರ ಹಲವಾರು ಆರೋಪ ಇನ್ನು ಮುಂದೆ ಶುರುವಾಗುತ್ತವೆ. ನಾನು ಕೋರ್ಟ್‌ಗೆ ಹೋಗಿ ಬಂದಿದ್ದೇನೆ. ನಾನು ದೆಹಲಿಯಲ್ಲಿದ್ದರು ಇಲ್ಲಿ ಕೇಸ್ ದಾಖಲಾಗುತ್ತದೆ. ನಾನು ರೇವಣ್ಣ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ನೀವು ಇಂತಹದ್ದಕ್ಕೆಲ್ಲಾ ಸಮಯ, ಶ್ರಮವನ್ನು ವ್ಯರ್ಥ ಮಾಡಿಕೊಳ್ಳುವ ಬದಲು ಸರಿಯಾದ ವಕೀಲರನ್ನು ನೇಮಕ ಮಾಡಿಕೊಂಡು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ಬಗ್ಗೆ ಸರಿಯಾಗಿ ಹೋರಾಡಿ ಎಂದು ಸಲಹೆ ಕೊಡುತ್ತೇನೆ ಎಂದು ಕುಟುಕಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ದೇವರಾಜೇಗೌಡರು, ಮೈತ್ರಿ ವಿಚಾರನೇ ಬೇರೆ, ಕಾನೂನು ವಿಚಾರನೇ ಬೇರೆ, ಮೈತ್ರಿ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ದೆಹಲಿ ನಾಯಕರಿಗೆ, ರಾಜ್ಯದ ನಾಯಕರ ಜೊತೆ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

LEAVE A REPLY

Please enter your comment!
Please enter your name here