ಹಾಸನ: ‘ಜಿಲ್ಲೆಯ ಎರಡು ರಿಕ್ರಿಯೇಶನ್ ಕ್ಲಬ್ಗಳ ಮೇಲೆ ದಾಳಿ ನಡೆಸಿ, ಜೂಜಾಡುತ್ತಿದ್ದ 39 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ₹ 75,410 ನಗದು, ಮೊಬೈಲ್ ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಖಚಿತ ಮಾಹಿತಿ ಆಧರಿಸಿ ಜಿಲ್ಲೆಯ ಹಿರೀಸಾವೆ ಪಟ್ಟಣದ ಚೌಡೇಶ್ವರಿ ರಿಕ್ರಿಯೇಶನ್ ಕ್ಲಬ್ ಮೇಲೆ ಆಗಸ್ಟ್ 25ರಂದು ರಾತ್ರಿ ದಾಳಿ ನಡೆಸಲಾಗಿದ್ದು, 28 ಮಂದಿಯನ್ನು ಬಂಧಿಸಲಾಗಿದೆ. ಪಣಕಿಟ್ಟಿದ್ದ ₹ 44,150 ನಗದು, 20 ಮೊಬೈಲ್ ಎರಡು ಬೈಕ್, ಒಂದು ಕಾರು ವಶಕ್ಕೆ ಪಡೆದು ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಸಕಲೇಶಪುರ ತಾಲ್ಲೂಕಿನ ಬಾಳ್ಳು ಪೇಟೆಯ ಪ್ಲಾಂಟರ್ಸ್ ಕ್ಲಬ್ ಮೇಲೆ ಆಗಸ್ಟ್ 27ರಂದು ರಾತ್ರಿ ದಾಳಿ ನಡೆಸಿ 11 ಮಂದಿಯನ್ನು ಬಂಧಿಸಲಾಗಿದ್ದು, ₹ 31,260 ನಗದು, ಆರು ಕಾರು ಹಾಗೂ 12 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಕಾನೂನು ಕ್ರಮದ ಎಚ್ಚರಿಕೆ: ಜಿಲ್ಲೆಯಲ್ಲಿ ಅನಧಿಕೃತವಾಗಿ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಜೂಜಾಟ ನಡೆಸುತ್ತಿರುವವರ ಬಗ್ಗೆ ಸಾರ್ವಜನಿಕರು ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ರಿಕ್ರಿಯೇಷನ್ ಹೆಸರಿನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿದಾಗ, ನ್ಯಾಯಾಲಯಗಳಿಗೆ ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆಯೂ ಇಲಾಖೆಯ ಗಮನಕ್ಕೆ ಬಂದಿದೆ. ಕ್ಲಬ್ನಲ್ಲಿ ಯಾವುದೇ ಜೂಜಾಟ ನಡೆಯುತ್ತಿಲ್ಲ ಎಂದು ಸುಳ್ಳು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿರುವ ಬಗ್ಗೆಯೂ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಎಚ್ಚರಿಕೆ ನೀಡಿದರು.