`ಅಭಿವೃದ್ದಿಯ ಹುಂಬ’ ಹರಿಕಾರ ರೇವಣ್ಣನನ್ನು ಹಾಸನದ ಜನತೆ ನೆನೆಯುತ್ತಿದ್ದಾರೆ….!ದೊಡ್ಡಸ್ಪತ್ರೆ ನಿರ್ಮಾಣವಾಗದಿದ್ದರೆ ಜನರ ಸ್ಥಿತಿ ಏನಾಗುತ್ತಿತ್ತು..?
`ಅಭಿವೃದ್ದಿ ರಾಕ್ಷಸ’ ನ ಬಗ್ಗೆ ಒಂದಷ್ಟು ಮನದಾಳದ ಮಾತು….-ನಾಗರಾಜ್ ಹೆತ್ತೂರು
9110228083( ಕೃಪೆ: ಭೀಮ ವಿಜಯ)

0

ಹಾಸನ: ಜಿಲ್ಲೆಯ ಜನತೆ ಮಾಜಿ ಸಚಿವ ರೇವಣ್ಣನನ್ನು ನೆನೆಯುತ್ತಿದ್ದಾರೆ…
ಅನೇಕ ಮಹತ್ವದ ಕಾರಣಗಳಿಗೆ ಈಗ ರೇವಣ್ಣ ನೆನಪಾಗುತ್ತಿದ್ದಾರೆ.
ಹೌದು…!
ಅನೇಕ ಕಾರಣಗಳಿವೆ. ಪ್ರಮುಖವಾಗಿ ಕೋವಿಡ್ ಮತ್ತು ಜನರ ಆರೋಗ್ಯದ ಕಾರಣಗಳಿಗಾಗಿ ಜನರು ರೇವಣ್ಣನನ್ನು ಅಕ್ಷರಶಃ ನೆನಪಿಸಿಕೊಳ್ಳುತ್ತಿದ್ದಾರೆ. ಹಾಸನದಂತ ಹಾಸನದಲ್ಲಿ ಇಂತಹ ಜಿಲ್ಲಾಸ್ಪತ್ರೆಯನ್ನು ಕಟ್ಟಿಸಿ ಅನೇಕ ಜೀವಗಳನ್ನು ಉಳಿಸಲು ಕಾರಣವಾಗಿದ್ದಕ್ಕೆ ರೇವಣ್ಣ ನೆನಪಾಗುತ್ತಿದ್ದಾರೆ.
ಇಡೀ ರಾಜ್ಯ ಕರೋನಾದಿಂದ ತತ್ತರಿಸುತ್ತಿರುವಾಗ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ರೋಗಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬೆಡ್ ಸಿಗದೆ ಒದ್ದಾಡುತ್ತಿದ್ದ ರೋಗಿಗಳನ್ನು ಹಾಸನದಲ್ಲಿ ಬೆಡ್ ಖಾಲಿ ಇವೆ ಬನ್ನಿ … ಎನ್ನುವಷ್ಟರ ಮಟ್ಟಿಗೆ ಹಾಸನ ಜಿಲ್ಲಾಸ್ಪತ್ರೆ ಕೈ ಬೀಸಿ ಕರೆಯುತ್ತಿತ್ತು. ಈ ಸುದ್ದಿ ಬರೆಯುವ ಹೊತ್ತಿಗೆ ಅಲ್ಲೂ ಕೂಡ ಸಂಪೂರ್ಣ ಭರ್ತಿಯಾಗಿದೆ.
ನಿಜ…
ಒಂದು ಜೋಕ್ ಚಾಲ್ತಿಯಲಿತ್ತು.. ಸರ್ಕಾರ ಏನಾದರೂ ನೇಣಿನ ಕುಣಿಕೆಗಳು ಬಿಡುಗಡೆಯಾಗಿವೆ ಎಂದರೆ ಹಾಸನಕ್ಕೆ ಐವತ್ತು ಬೇಕು ಎಂದು ಕಣ್ಣು ಮುಚ್ಚಿಕೊಂಡು ರೇವಣ್ಣ ಕಿತ್ತುಕೊಳ್ಳಲು ಬರುತ್ತಿದ್ದರು.
ಅಭಿವೃದ್ದಿ ಬಗ್ಗೆ ರೇವಣ್ಣನವರಿಗಿದ್ದ ರಾಕ್ಷಸತನಕ್ಕೆ ಇದು ಸಾಕ್ಷಿ.
ಕಾರಣ ಇಷ್ಟೆ..!
ಎಲ್ಲವೂ ನಮ್ಮ ಜಿಲ್ಲೆಗೆ ಬೇಕು ಹಾಸನಕ್ಕೆ ಬೇಕು… ಹಾಸನದಲ್ಲಿ, ಹೊಳೆನರಸೀಪುರ ತಾಲೂಕಿಗೆ, ಅದರಲ್ಲೂ ಪಡುವಲಹಿಪ್ಪೆಗೆ ಬೇಕು ಎಂಬ ಹುಚ್ಚು ಅಭಿವೃದ್ದಿಯ ಚಿಂತನೆ . ಏನೇ ಹೊಸದು ಬರಲಿ ಜಿಲ್ಲೆಗೆ ಬೇಕು ಎಂದು ಹಠ ಹಿಡಿದು ಮಂಜೂರು ಮಾಡಿಸಿಕೊಂಡು ಬರುತ್ತಿದ್ದವರು ರೇವಣ್ಣ.

ಪ್ರಮುಖವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇವರು ತಂದಿರುವ ಯೋಜನೆಗಳನ್ನು ಯಾರೂ ಅಲ್ಲ ಗೆಳೆಯುವಂತಿಲ್ಲ ಮತ್ತು ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣದ ಹರಿಕಾರ ಎಂದು ಕರೆಯಲ್ಪಡುವುದರಲ್ಲಿ ಎರಡು ಮಾತಿಲ್ಲ.
ವೈಯಕ್ತಿಕವಾಗಿ ರೇವಣ್ಣ ಅವರನ್ನು ಅನೇಕ ಸಲ ಟೀಕಿಸಿ ಬರೆದಿದ್ದೇನೆ. ದಲಿತ ವಿರೋಧಿ ಎಂದು ಬರೆದಿದ್ದೇನೆ. ನಾನು ಅವರ ಅಭಿಮಾನಿಯೇನು ಅಲ್ಲ. ಪ್ರಸ್ ಮೀಟ್ ಗಳಲ್ಲಿ ಅವರನ್ನು ಮಾತಾಡಿಸುವುದು ಬಿಟ್ಟರೆ ಸಮಾಜಕ್ಕೆ , ಅಭಿವೃದ್ದಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಹೇಳಿರುವುದು ಬಿಟ್ಟರೆ ನನಗೆ ಅಂತಹ ಹತ್ತಿರದ ಪರಿಚಯವೇನು ಇಲ್ಲ. ಆದರೆ ಅಭಿವೃದ್ದಿಗೆ ಬಗ್ಗೆ ಅವರಿಗಿರುವ ರಾಕ್ಷಸತನದ ಬಗ್ಗೆ ಗೊತ್ತಿದೆ. ಅಭಿವೃದ್ದಿ ಎಂದರೆ ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ, ಯಾರ ಮಾತಿಗೂ ಕನಿಷ್ಟ ಮಣೆ ಹಾಕುವುದಿಲ್ಲ. ಕೇಳಿಕೊಳ್ಳುವ ಕಿವಿಯೂ ಇರುವುದಿಲ್ಲ. ಅಂತಹ ವಿಚಿತ್ರ ವ್ಯಕ್ತಿತ್ದದ ರೇವಣ್ಣನ ಮಾಡಿರುವ ಒಳ್ಳೆಯ ಕೆಲಸಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು.

ಎಲ್ಲವೂ ನನಗೆ ಬೇಕು ಎಂದು ಬಾಚಿ ತಂದವರು…

ರೇವಣ್ಣ ಅಧಿಕಾರದಲಿದ್ದಾಗಲೆಲ್ಲ ಹಾಸನಕ್ಕೆ ಎಲ್ಲಾ ಯೋಜನೆಗಳಲ್ಲೂ ಸಿಂಹಪಾಲು . ಹಾಗೆ ಮಂಜೂರು ಮಾಡಿಕೊಂಡು ಬಂದ ಯೋಜನೆಗಳಲ್ಲಿ ಕಮಿಷನ್ ಪಾಲು ಹೊಡೆಯುತ್ತಾರೆ ಎಂಬ ಆರೋಪಗಳ ನಡುವೆಯೂ ಹಾಸನಕ್ಕೆ ಒಂದು ಮೆಡಿಕಲ್ ಕಾಲೇಜು, ಸರ್ಕಾರಿ ಎಂಜಿನಿಯರ್ ಕಾಲೇಜು. ಪ್ರತಿ ಹೋಬಳಿಗೂ ಪ್ರಥಮ ದರ್ಜೆ ಕಾಲೇಜುಗಳು, ನೂರಾರು ವಿದ್ಯಾರ್ಥಿ ನಿಲಯಗಳು , ಮುರಾರ್ಜಿ ವಸತಿ ಶಾಲೆಗಳು .. ಏಷ್ಯಾ ಖಂಡದಲ್ಲಿ ಎರಡನೇ ದೊಡ್ಡದಾದ ಹೊಸ ಬಸ್ ನಿಲ್ದಾಣ , ಹಳೇ ಬಸ್ ನಿಲ್ದಾಣ ,ಅನೇಕ ರಸ್ತೆಗಳು, ಏರ್ ಪೋರ್ಟ್ ಗೆ ಚಾಲನೆ ,
ಇಡೀ ರಾಜ್ಯದಲ್ಲೇ ಜಿಲ್ಲೆಯಲ್ಲಿ ಎರಡು ನರ್ಸಿಂಗ್ ಕಾಲೇಜುಗಳು ಹಾಸನ ಜಿಲ್ಲೆಯಲ್ಲಿರುವುದು ವಿಶೇಷ. ಎರಡು ಸರ್ಕಾರಿ ಕಾನೂನು ಕಾಲೇಜು, ಎರಡು ಗೃಹ ವಿಜ್ಞಾನ ಕಾಲೇಜುಗಳು, ಕೆಎಸ್ ಅರ್ ಟಿಸಿ ಟ್ರೈನಿಂಗ್ ಸೆಂಟರ್ , ನೂರಾರು ಜನಕ್ಕೆ ಉದ್ಯೋಗ ನೀಡುವ ಮೆಘಾ ಡೈರಿ ಹೀಗೆ ಅನೇಕ ರೀತಿಯ ಅಗತ್ಯವಾದ ಕೆಲಸಗಳನ್ನು ಖುದ್ದು ನಿಂತು ಮಾಡಿಸಿಕೊಂಡು ಬಂದು ಹಾಸನ ಜನತೆಗೆ ಕೊಟ್ಟ ಒಬ್ಬ ರಾಜಕಾರಣಿ ಇದ್ದರೆ ಅದು ರೇವಣ್ಣ ಎಂಬ ಮಾತ್ರ ಎಂಬುದನ್ನು ಅವರ ವಿರೋಧಿಗಳು ಕೂಡ ಒಪ್ಪಲೇಬೇಕು.

ಈ ನಡುವೆ ಕೆಲವು ವೈಜ್ಞಾನಿಕವಾಗಿ ಸಮಂಜಸವಾಗಿಲ್ಲ ಎನ್ನುವ ಆರೋಪಗಳ ಹೊರತಾಗಿ ಜಿಲ್ಲೆಯ ಅಭಿವೃದ್ದಿಯ ಹರಿಕಾರ ಎಂಬುದರಲ್ಲಿ ಎರಡು ಮಾತಿಲ್ಲ.

ದೊಡ್ಡಾಸ್ಪತ್ರೆ ಕಟ್ಟಿಸದಿದ್ದರೆ ಹಾಸನ ಜನರ ಸ್ಥಿತಿ ಏನಾಗುತ್ತಿತ್ತು..?

ಸಧ್ಯ ಹಾಸನದ ಚಯಚಾಮರಾಜೇಂದ್ರ ಆಸ್ಪತ್ರೆ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿರುವ ಎಲ್ಲ ಆಸ್ಪತ್ರೆಗಳಿಗಿಂತ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಸರು ಪಡೆದಿದೆ. ಹಿಮ್ಸ್ ಗೆ ಒಳಪಡುವ ಈ ಆಸ್ಪತ್ರೆಯನ್ನು ಕಟ್ಟಲು ಹೊರಟಾಗ ಹಾಸನ ನಗರದ ಕಂದ್ರ ಸ್ಥಳದಲ್ಲಿ ಬೇಕಿತ್ತೇ..? ಎಲ್ಲಾದರೂ ಹೊರಗಡೆ ಕಟ್ಟಬಹುದಿತ್ತ;ಲ್ಲವೇ..? ಎಂದು ಎಲ್ಲರೂ ಟೀಕಿಸಿದರು. ಆದರೆ ಹಾಸನಕ್ಕೆ ಬಂದ ಹಳ್ಳಿ ಜನರಿಗೆ ರೋಗಿಗಳಿಗೆ ಅನುಕೂಲವಾಗಲೆಂದು ಇಲ್ಲಿಯೇ ಮಾಡಬೇಕೆಂದು ಹುಂಬು ತೀರ್ಮಾನ ಕೈಗೊಂಡ ರೇವಣ್ಣ ಶತಮಾನದ ಹೈಸ್ಕೂಲ್ ಮತ್ತು ಮೈದಾನ ಫೀಲ್ಡ್ ಹೋದರೂ ಸರಿಯೇ ಇಲ್ಲಿಯೇ ಮಾಡಿ ತೀರುತ್ತೇನೆಂದು ಛಲ ಮಾಡಿ ಹಾಸನದಲ್ಲಿ ಸಾವಿರ ಬೆಡ್ ಗಳ ಅತ್ಯಾಧುನಿಕ ಸೌಕರ್ಯ ಹೊಂದಿರುವ ದೊಡ್ಡಾಸ್ಪತ್ರೆ ನಿರ್ಮಾಣ ಮಾಡಿದರು. ಸುತ್ತ ಮುತ್ತಲ ಯಾವ ಜಿಲ್ಲೆಯಲ್ಲೂ ಇಲ್ಲದ ಅತ್ಯಾಧುನಿಕ ಸೌಲಭ್ಯಗಳು , ಡಯಾಲಿಸೀಸ್ ಸೌಲಭ್ಯ, ಕಿಮೋ ಥೆರಫಿ, ಹೃದ್ರೋಗ ವಿಭಾಗ, ಅತ್ಯಾಧುನಿಕ ಲ್ಯಾಬ್, ಆಮ್ಲ ಜನಕ ಉತ್ಪಾದನೆ ಕೇಂದ್ರ, ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಹೀಗೆ ಯಾವುದೊಂದು ಸೌಲಭ್ಯಕ್ಕೂ ಕೊರತೆ ಆಗದಂತೆ ನೋಡಿಕೊಂಡರು. ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಯ ಮೂಲಕ ಹಾಸನದಂತ ಅನೇಕ ಖಾಸಗಿ ನರ್ಸಿಂಗ್ ಹೋಂ ಗಳಿಗೆ ಸೆಡ್ಡು ಹೊಡೆಯುವಂತೆ ಜಿಲ್ಲಾಸ್ಪತ್ರೆ ನಿರ್ಮಿಸಿದರು. ಈ ನಡುವೆ ಎಲ್ಲಾ ಕಡೆ ಹಾಕುವ ಅಡಿಗಲ್ಲಿನಲ್ಲಿ ರೇವಣ್ಣ ಹೆಸರಲ್ಲಿ ಇರಬೇಕಂಬ ಆಸೆ ಎಂಬ ಆರೋಪ ಬಂದಿತ್ತಾದರೂ ಅಡಿಗಲ್ಲು ಯಾರಾದರೂ ಹಾಕಿಕೊಳ್ಳಲಿ ಆದರೆ ಅಭಿವೃದ್ದಿ ಮುಖ್ಯವಲ್ಲವೇ ಎಂದು ಜನ ಮಾತನಾಡಿಕೊಂಡರವರೂ

.
ಹೌದು…? ಅಂದು ದೊಡ್ಡಾಸ್ಪತ್ರೆ ಕಟ್ಟಿಸಿದ ಪರಿಣಾಮ ಕೊರಾನಾ ಕಾಲದಲ್ಲಿ ಸಾವಿರಾರು ಜೀವಗಳು ಉಳಿಯುತ್ತಿವೆ. ಬೆಂಗಳೂರಿನಿಂದ ಹಾಸನಕ್ಕೆ ಜನ ಬರುತ್ತಿದ್ದಾರೆ… ಸೌಲಭ್ಯದ ಕೊರತೆ ಎಂದು ಈವರೆಗೆ ಯಾವ ಜೀವವೂ ಹೋದ ಬಗ್ಗೆ ವರದಿ ಆಗಿಲ್ಲ. ಯುದ್ದ ಕಾಲದಲ್ಲಿ ಎಲ್ಲವನ್ನೂ ಎದುರಿಸಲು ಸಿದ್ದ ಎಂಬಂತೆ ಹಾಸನ ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾದ ಡಾ . ಕೃಷ್ಣಮೂರ್ತಿ, ಹಿಮ್ಸ್ ಮುಖ್ಯ ಬಿಸಿ. ರವಿ ಕುಮಾರ್ , ಜಿಲ್ಲಾ ವೈದ್ಯಾಧಿಕಾರಿ ಡಾ ಸತೀಶ್ ಹಾಗೂ ಇಲ್ಲಿನ ಪ್ರತಿಯೊಬ್ಬ ವೈದ್ಯರು, ದಾದಿಯರು ಹಾಗೂ ಸೆಕ್ಯೂರಿಟಿ ಸೇರಿದಂತೆ ಇಡೀ ವೈದ್ಯ ಸಮೂಹ ಜಿಲ್ಲಾಸ್ಪತ್ರೆಯಲ್ಲಿ ಸಸ್ತ್ರಜ್ಜಿತ ಸೈನಿಕರಂತೆ ನಿಂತಿದ್ದು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಹಾಸನದ ಜನತೆ ಒಂದಷ್ಟು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ನಿತ್ಯ ಫಾಲೋ ಅಪ್ ಮಾಡುವ ರೇವಣ್ಣ… ನಿಜವಾದ ವಿರೋಧ ಪಕ್ಷದ ನಾಯಕ

ರಾಜಕೀಯದಲ್ಲಿ ಏರಳಿತ ಮಾಮೂಲಿ. ಟೀಕೆ ಟಿಪ್ಪಣಿಗಳೂ ಇದ್ದಿದ್ದೆ. ಆದರೂ ರೇವಣ್ಣ ವಾರದಲ್ಲಿ ಕನಿಷ್ಟ ನಾಲ್ಕು ದಿನ ಹಾಸನದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿ ಮಾಡುವುದು ಮಾಮೂಲು. ಒಂದು ಹಂತದಲ್ಲಿ ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಮಾಡಬೇಕಾದ ಕೆಲಸಗಳನ್ನೂ ರೇವಣ್ಣನವರೇ ಮಾಡುತ್ತಿರುವುದು ಇನ್ನೂ ಸೂಜಿಗ. ತಪ್ಪು ಮಾಡುವ ರಾಜ್ಯ ಸರ್ಕಾರದ ವಿರುದ್ದ ಹಾಗೂ ಜಿಲ್ಲಾಡಳಿತಕ್ಕೆ ಚಾಟಿ ಬೀಸುತ್ತಲೇ ಜಿಲ್ಲೆಯಲ್ಲಿ ಒಬ್ಬ ವಿರೋಧ ಪಕ್ಷದ ಸ್ಥಾನವನ್ನು ಅತ್ಯಂತ ಪ್ರಾಮಾಣಿಕವಾಗಿ ತುಂಬುತ್ತಿದ್ದಾರೆ ರೇವಣ್ಣ. ಇ್ತತೀಚೆಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸಿವರ್ ಕೊರತೆ ಇರುವುದನ್ನು ಮನಗಂಡು ಸುಮಾರು 410 ಜನರಿಗೆ ರೆಮಿಡಿಸಿವರ್ ಒದಗಿಸಿಕೊಟ್ಟಿದ್ದಾರೆ. ಅಲ್ಲದೇ ಇಡೀ ತಿಂಗಳು ಜಿಲ್ಲಾದ್ಯಂತ ಹಳ್ಳಿ ಹಳ್ಳಿಗೆ ಹೋಗುತ್ತಿದ್ದು ಈ ವಯಸ್ಸಿನಲ್ಲಿ ಅವರ ಪ್ರಾಮಾಣಿಕ ಕಾಳಜಿಯನ್ನೂ ನೆನಯಲೇಬೇಕಿದೆ.
ಇತ್ತೀಚೆಗಷ್ಟೆ 19 ಹಳ್ಳಿಗಳಲ್ಲಿ ಸುತ್ತಿ ಬಂದಿರುವ ರೇವಣ್ಣ ತಮ್ಮ ಪತ್ನಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಅವರ ಮೂಲಕ ಜಿಲ್ಲಾ ಪಂಚಾಯಿತಿ ಅನುದಾನದಡಿ ಒಟ್ಟು ಏಳು ಆಂಬುಲೆನ್ಸ್ ಒದಗಿಸಿದ್ದು ಅದರಲ್ಲಿ ನಾಲ್ಕು ಆಂಬುಲೆನ್ಸ್ ಗಳು ವೆಂಟಿಲೇಟರ್ ಸೌಲಭ್ಯ ಹೊಂದಿವೆ. ಸಕಲೇಶಫುರ, ಬೇಲೂರು, ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ದಲ್ಲಿ ಸಂಚರಿಸುತ್ತಿವೆ.
ಇದರ ಹಿಂದಿನ ಉದ್ದೇಶ ಸೌಲಭ್ಯಗಳ ಕೊರತೆಯಿಂದ ಹಾಸನದಲ್ಲಿ ಸಾವು ಎಂಬುದು ಬರಬಾರದು ಎಂಬು ಆಶಯವನ್ನು ಇಲ್ಲ ಎಲ್ಲರೂ ನೆನೆಯಲೇಬೇಕಿದೆ.

ಹೌದು… ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಅಥವಾ ಯಾವುದೇ ರೋಗ ಎಂದು ದಾಖಲಾದವರು ಕೋವಿಡ್ ಗೆದ್ದು ಬಂದವರು ಅಥವಾ ಇತರೆ ರೋಗಿಗಳು ಹೊರಗೆ ಬಂದ ನಂತರ ದೊಡ್ಡಸ್ಪತ್ರೆ ಕಟ್ಟಿಸಿದ ಮಹಾನುಭವನಿಗೊಂದು ನಮಸ್ಕಾರ ಎಂದು ಹೇಳಿ ಹೋಗುತ್ತಿರುವುದಂತೂ ಸುಳ್ಳಲ್ಲ…
ರಾಜಕೀಯ ಅಥವಾ ವೈಯಕ್ತಿಕ ಟೀಕೆ ಟಿಪ್ಪಣಿ ಏನೇ ಇರಬಹುದು ಈ ಸಂದರ್ಭದಲ್ಲಿ ರೇವಣ್ಣ ಮಾಡಿರುವ ಒಳ್ಳೆ ಕೆಲಸಗಳನ್ನು ಎಲ್ಲರೂ‌ ನೆನೆಯಲೇಬೇಕು…

LEAVE A REPLY

Please enter your comment!
Please enter your name here