ಹಾಸನ: ರಾಗಿ ಖರೀದಿ ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಒಬ್ಬರೇ ಅಲ್ಲ, ಅವರ ಹಿಂಬಾಲಕರನ್ನೂ ಕರೆದುಕೊಂಡು ಹೋಗಿ ಧರ್ಮಸ್ಥಳ ಮಂಜುನಾಥನ ಮುಂದೆ ಆಣೆ ಮಾಡಲಿ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಸವಾಲು ಹಾಕಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅವರು ಆಣೆ ಪ್ರಮಾಣ ಮಾಡಿದ ನಂತರ ನಾನು ಹಗರಣದ ಎಲ್ಲಾ ದಾಖಲೆಗಳನ್ನು ಜನರ ಮುಂದಿಡುವೆ. ನನಗೆ ದೇವರ ಮೇಲೆ ನಂಬಿಕೆ ಇದೆ. ಆಣೆ ಪ್ರಮಾಣದ ಮೇಲೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಪ್ರಮಾಣ ಮಾಡುವಾಗ ಗೌಡರಿಗೆ ಮೋಸ ಮಾಡಲ್ಲ ಎಂದೂ ಪ್ರಮಾಣ ಮಾಡಲಿ ಎಂದರು.
ನಿನ್ನೆ ಅರಸೀಕೆರೆಯಲ್ಲಿ ಅಭಿಮಾನಿಗಳನ್ನು ಕಟ್ಟುಕೊಂಡು ಪ್ರತಿಭಟನೆ ಮಾಡಿದ ಶಾಸಕರು, ಜೆಡಿಎಸ್ನಿಂದ ಗೆದ್ದು, ಆ ಪಕ್ಷದ ಬಾವುಟ ಹಿಡಿದು ಬಂದವರಿಗೆ ಅವಕಾಶ ನೀಡಿಲ್ಲ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಉಪಕಾರ ಸ್ಮರಣೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.
ನನ್ನ ವಿರುದ್ಧ ಅಶ್ಲೀಲ ಪದ ಬಳಸಿ ಟೀಕೆ ಮಾಡಿದ್ದಾರೆ. ಇದು ನನಗೆ, ನನ್ನ ಕುಟುಂಬಕ್ಕೆ ನೋವು ತಂದಿದೆ ಎಂದರು.
![](https://hassananews.com/wp-content/uploads/2022/08/FB_IMG_1661257407890-1024x680.jpg)
ಡಿ.ಕೆ.ಕುರ್ಕೆಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಆ.8 ರಂದು ನಾವು ಪ್ರತಿಭಟನೆ ಮಾಡಿದ್ದೆವು. ಅದಕ್ಕೆ ವಿರುದ್ಧವಾಗಿ ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಆದರೆ ಅವರ ನಿರೀಕ್ಷೆಯಂತೆ ಜನ ಸೇರಿರಲಿಲ್ಲ. ಇದರಿಂದ ಅವರಿಗೆ ಸೋಲಿನ ಭಯ ಕಾಡಲಾರಂಭಿಸಿದೆ ಎಂದರು.
ನನ್ನ ಮೇಲೆ ಅಟ್ರಾಸಿಟಿ ಕೇಸ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಲಿಸ್ಟ್ ಪಡೆದರೆ ಇದರಲ್ಲಿ ಯಾರು ನಿಸ್ಸೀಮರು ಎಂದು ತಿಳಿಯಲಿದೆ. ಎಂ ಸ್ಯಾಂಡ್ ದಂಧೆಕೋರರು ಯಾರ ಜೊತೆ ಇದ್ದಾರೆ, ನಂಜೇಗೌಡರ ಕುಟುಂಬಕ್ಕೆ ಅನ್ಯಾಯ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.
ಪ್ರತಿಭಟನೆಗೆ ಹಣ ಕೊಟ್ಟು ಜನರ ಕರೆಸಿದ್ದರು ಎಂದು ದೂರಿದ ಅವರು,
ಅರಸೀಕೆರೆ ತಾಲೂಕಿನ ನಿಸರ್ಗ ಸಂಪತ್ತು ಲೂಟಿ ಮಾಡುವವರು ಯಾರು ಎಂದು ಹೇಳಿ ಎಂದು ಪ್ರಶ್ನಿಸಿದರು.
ನಾನು ಅಭಿವೃದ್ಧಿಗೆ ಅಡ್ಡಿಯಾಗಿದ್ದೀನಿ ಎಂದಿರುವ ನೀವು, ಬಾಣಾವರ-ಕಣಕಟ್ಟೆ ರೋಡ್ ಕಾಮಗಾರಿಯನ್ನು ಇನ್ನೂ ಏಕೆ ಮುಗಿಸಿಲ್ಲ.ಅಧಿಕಾರಿಗಳಿಗೆ ತೊಂದರೆ ನೀಡುತ್ತಿರುವವರು ನೀವು ಎಂದು ದೂರಿದರು.
ನನ್ನ ಈ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಿ ಎಂದು ಕೇಳಿದ ಸಂತೊಷ್, ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅದನ್ನು ನಿಮಗೆ ಸಹಿಸಲು ಆಗುತ್ತಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ನನ್ನ ಬಗ್ಗೆ ನಿಮಗೆ ಇಷ್ಟೊಂದು ಭಯ ಏಕೆ? ಜನ ನಿಮ್ಮಿಂದ ದೂರ ಆಗುತ್ತಿದ್ದಾರೆ ಎಂಬುದನ್ನು ತಿಳಿದು ಈಗ ಪ್ರತಿಭಟನೆ ನಾಟಕಕ್ಕೆ ಮುಂದಾಗಿದ್ದೀರಿ ಎಂದು ಟೀಕಿಸಿದರು.
ಜೆಡಿಎಸ್ ಬಾವುಟ ಹಿಡಿದು ದೇವೇಗೌಡರ ಪರ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ವೀಡಿಯೋ ಕೂಡ ಇದೆ ಎಂದರು.
ನಾನು ನನ್ನ ಪಕ್ಷ ಸಂಘಟನೆ ಮಾಡಿದರೆ ಅವರಿಗೆ ಭಯ ಏಕೆ, ನೀವು ಶಾಸಕರಾಗಿ ಒಳ್ಳೆ ಕೆಲಸ ಮಾಡಿದ್ದರೆ ಹಣ ಕೊಟ್ಟು ಜನರನ್ನ ಯಾಕೆ ಕರೆತರಬೇಕಿತ್ತು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ನನ್ನನ್ನ ಬ್ಲಾಕ್ ಮೇಲರ್ ಅಂತೀರಾ, ಜೆಡಿಎಸ್-ಕಾಂಗ್ರೆಸ್ ಪಕ್ಷಗಳನ್ನು ಬ್ಲಾಕ್ ಮೇಲ್ ಮಾಡ್ತಿರೋದು ಯಾರು ಎಂದು ಹೇಳಿ ಎಂದು ಆಗ್ರಹಿಸಿದರು.
ನೆನ್ನೆ ತಮ್ಮ ಮೇಲೆ ಶಿವಲಿಂಗೇಗೌಡ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿ ವಾಗ್ದಾಳಿ ನಡೆಸಿದರು.
ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ಶಾಸಕರು ಹೀಗೆಲ್ಲಾ ಮಾಡುತ್ತಿದ್ದಾರೆ. ನೀವು ಏನೇ ಹೇಳಿದರೂ, ತೀರ್ಮಾನ ಮಾಡುವವರ ಜನತೆ. ಮುಂದೆ ಅರಸೀಕೆರೆಯಲ್ಲಿ ಬಿಜೆಪಿ ಗೆಲುವು ಕಾಣಲಿದೆ. ನಮ್ಮ ಕೆಲಸ ಮುಂದಿಟ್ಟು ಜನರ ಬಳಿ ಹೋಗುತ್ತೇವೆ.
-ಎನ್.ಆರ್.ಸಂತೋಷ್, ಬಿಜೆಪಿ ಮುಖಂಡ