ಮನುಷ್ಯರು ಸಕಾರಾತ್ಮಕವಾಗಿ ಚಿಂತನೆ ಮಾಡಿ ತಮ್ಮನ್ನು ತಾವು ಆರೈಕೆ ಮಾಡಿಕೊಳ್ಳಬೇಕು ಡಾ.- ಸುರೇಶ್

0

ಹಾಸನ ಅ :  ಪ್ರತಿಯೊಬ್ಬ ಮನುಷ್ಯನು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತ ತಮ್ಮನ್ನು ತಾವು ಆರೈಕೆ ಮಾಡಿಕೊಳ್ಳಬೇಕಾದ ಸನ್ನಿವೇಶ ಇಂದಿನ ಸಮಾಜದಲ್ಲಿ ಉದ್ಬವಿಸಿದೆ ಎಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಾಮಾನ್ಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|| ಸುರೇಶ್ ತಿಳಿಸಿದ್ದಾರೆ.

   ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಗೂ ರೋಟರಿ ಮಿಡ್ ಟೌನ ವತಿಯಿಂದ ಉಪಶಮನ ಆರೈಕೆ ಕಾರ್ಯಕ್ರಮದ ಫಲಾನುಭವಿಗಳಿಗೆ ಏರ್ಪಡಿಸಿದ್ದ ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ  ಮೊಟ್ಟೆ  ವಿತರಿಸಿ ಮಾತನಾಡಿ ಸರ್ಕಾರದ ವತಿಯಿಂದ ಗುಣ ಪಡಿಸಲಾಗದ ಕ್ಯಾನ್ಸರ್ ಹಾಗೂ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಪಿಂಚಣಿ ಸೌಲಭ್ಯ ನೀಡುತ್ತಿದ್ದು ಇದರ ಸೌಲಭ್ಯವನ್ನು ಅವಶ್ಯಕತೆ ಇರುವ ರೋಗಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು.

       ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದು ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನವಿಲ್ಲದೇ ಹೆಚ್ಚಿನ ಕುಟುಂಬಗಳಲ್ಲಿ ಗಂಡ ಹೆಂಡತಿ ಒತ್ತಡದ ಬದುಕು ಸಾಗಿಸುತ್ತ, ಕುಟುಂಬದ ನಿರ್ವಹಣೆ ಹಾಗೂ ಗುಣಮಟ್ಟದ ಜೀವನ ನಡೆಸಲಾಗದೇ ಒತ್ತಡದಲ್ಲಿ  ಗುಣಪಡಿಸಲಾಗದ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಇಂತಹ ಕುಟುಂಬಗಳನ್ನು ಗುರುತಿಸಿ ಆಪ್ತ ಸಮಾಲೋಚನೆ ಮಾಡಬೇಕಾಗಿದೆ, ಅಲ್ಲದೇ ಗುಣ ಪಡಿಸಲಾಗದೇ ಇರುವ ರೋಗಗಳಿಂದ ಬಳಲುತ್ತಿರುವ ಬಡ ರೋಗಿಗಳ ಆರೈಕೆಗೆ ಹೆಚ್ಚಿನ ಸಮುದಾಯ ಸ್ವಯಂ ಸೇವಕರು ಬೇಕಾಗಿದ್ದಾರೆ ಎಂದು ಅವರು ತಿಳಿಸಿದರು.

       ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಸನ ಶಾಖೆಯ ಸ್ಥಳೀಯ ಸಂಚಾಲಕರು ಮತ್ತು ಉಪಾಧ್ಯಕ್ಷರಾದ ಡಾ. ಸುಧೀರ್ ಬಿ ಬೆಂಗಳೂರ ಮಾತನಾಡಿ ದಿನೇ ದಿನೇ ಗುಣಪಡಿಸಲಾಗದೇ ಇರುವ ರೋಗಗಳಿಗೆ ಹೆಚ್ಚಿನ ಜನರು ತುತ್ತಾಗುತ್ತಿದ್ದು, ಇಂತಹ ಜನರಿಗೆ ಉಪಶಮನ ಆರೈಕೆ ಅವಶ್ಯಕತೆ ಇದೆ ಆದ್ದರಿಂದ ಮನೆ ಆಧಾರಿತ ಉಪಶಮನ ಆರೈಕೆ ಅವಶ್ಯಕತೆ ಇರುವ ಜನರು ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ತಂಡದ ಸಹಕಾರ ಪಡೆದು ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಸಿಗುವ ಸೌಲಭ್ಯ ಪಡೆಯುವಂತೆ ತಿಳಿಸಿದರು.

     ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾನ್ಸರ್ ವಿಭಾಗದ ನಿವೃತ ಪ್ರಿವೆನ್‍ಟೀವ್ ಅಂಕಾಲಾಜಿಸ್ಟ್ ಡಾ|| ಜಗದೀಶ್ ಮಾತನಾಡಿ ಮನುಷ್ಯ ಆರೋಗ್ಯದಿಂದ ಇರಬೇಕಾದರೆ ಪ್ರತಿಯೊಬ್ಬ ಮನುಷ್ಯನಲ್ಲಿ ಆಚಾರ, ವಿಚಾರ, ಆಹಾರ, ವಿಹಾರ ಆರೋಗ್ಯಯುತವಾಗಿರಬೇಕು ಆಗ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ, ಪ್ರತಿಯೊಬ್ಬರು ಪ್ರತಿ ದಿನ ಪೌಷ್ಠಿಕ ಆಹಾರ ಸೇವಿಸುತ್ತ ಚಟುವಟಿಕೆಯಿಂದ ಇರಬೇಕು ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಸುಮಾರು 30 ಫಲಾನುಭವಿಗಳಿಗೆ ಒಬ್ಬರಿಗೆ 15 ಮೊಟ್ಟೆಗಳಂತೆ ಒಟ್ಟು 450 ಮೊಟ್ಟೆಗಳನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲು ಆರ್ಥಿಕ ಸಹಾಯ ಮಾಡಿದ ರೋಟರಿ ಮಿಡ್ ಟೌನ್ ಗೆ ಕೃತಜ್ಞತೆ ಸಲ್ಲಿಸಲಾಯಿತು, ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ರೊ, ಸುರೇಶ್ ಹಾಗೂ ಸದಸ್ಯರಾದ ರೊ, ರಮಾನಂದ  ಹಾಗೂ ಗೃಹ ವೈದ್ಯರಾದ ಡಾ. ರಾಜ್ ಕುಮಾರ್, ಡಾ. ನಿಖಿಲ್ ಹಾಗೂ ಎಸ್.ವಿ.ವೈ.ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.


    ಕಾರ್ಯಕ್ರಮದಲ್ಲಿ ಎಸ್.ವಿ.ವೈ.ಎಂ ಹಾಸನ ಶಾಖೆಯ ಜಿಲ್ಲಾ ಸಂಯೋಜಕರಾದ ಯೋಗನಾಥ್ ಎಂ.ಹೆಚ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು,

LEAVE A REPLY

Please enter your comment!
Please enter your name here