ಕನಕದಾಸರ ಆದರ್ಶ ಅನುಕರಣೀಯ:ಪ್ರೀತಂ ಗೌಡ

0

ಕನಕದಾಸರು ನಾಡು ಕಂಡ ಸಂತ ಶ್ರೇಷ್ಠ ರಲ್ಲೊಬ್ಬರಾಗಿದ್ದು ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯ ಎಂದು ಶಾಸಕರಾದ ಪ್ರೀತಂ ಜೆ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸುಗಳನ್ನು ಬದಲಿಸುತ್ತಾ ಸಮಾಜವನ್ನು ಸರಿದಾರಿಗೆ ತರುಲು ಶ್ರಮಿಸಿದರು. ಅವರ ಜೀವನ ಹಾಗೂ ಸಾಹಿತ್ಯ ಎರಡೂ ನಮಗೆ ಉತ್ತಮ ಮಾರ್ಗವನ್ನು ತೋರುತ್ತವೆ ಎಂದರು .

ಕೋವಿದ್ ಕಾರಣದಿಂದ ಈ‌ ಬಾರಿ‌ ಸರಳವಾಗಿ ಕನಕ ಜಯಂತಿ ಆಚರಿಸಲಾಗಿದೆ ಮುಂದಿನ ವರ್ಷ ಇನ್ನಷ್ಟು ಉತ್ತಮವಾಗಿ ಕಾರ್ಯಕ್ರಮ ಆಯೋಜಿಸೋಣ ಎಂದು ಶಾಸಕರು ಹೇಳಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಕುಲ ಕುಲವೆಂದು ಬಡಿದಾಡದಿರಿ… ಎಂದು ಕನಕದಾಸರು ನೀಡಿದ‌ ಸಂದೇಶ ಇಂದಿಗೂ ಪ್ರಸ್ತುತ.
ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ .ಆದರೆ ನಮ್ಮ ಮನಸ್ಥಿತಿಗಳು ಬದಲಾವಣೆಯಾಗಬೇಕು ಎಂದರು.

ಕನಕದಾಸರು ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ತೋರಿಸಿದ್ದಾರೆ. ಅವರ ಆದರ್ಶಗಳು ಎಲ್ಲರೂ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಆರ್.ಗಿರಿಶ್ ತಿಳಿಸಿದರು.

ಕೋವಿದ್ ಹಿನ್ನಲೆಯಲ್ಲಿ ಜನರು‌ ಜಾಗೃತರಾಗಬೇಕು .ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನಿಂದ‌ ದೂರ ಉಳಿಯಬೇಕು ಎಂದು ಜಿಲ್ಲಾಧಿಕಾರಿ ಕರೆ‌ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಅವರು‌ ಮಾತನಾಡಿ ಕನಕದಾಸರು 16 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಹಾದಿ ತೋರಿದವರು.

ಹುಟ್ಟಿನಲ್ಲಿ ಕೆಳ ವರ್ಗದಲ್ಲಿದ್ದರೂ , ನಂತರ ಜ್ಞಾನ ಸಂಪಾದಿಸಿ ಮನ ಪರಿವರ್ತನೆ ಗೊಂಡು ಭಕ್ತಿ ಮಾರ್ಗದಲ್ಲಿ ಸಾಗಿ ಸಮಾಜ ಸುಧಾರಣೆಗೆ ಪ್ರೇರಣೆಯಾದರು ಎಂದು ಹೇಳಿದರು .

ಕನಕದಾಸರು ಎಲ್ಲಾ ಜನ ಸಮುದಾಯಗಳಿಗೂ ಸೇರಿದ ಮಹಾನ್ ಪುರುಷರಾಗಿದ್ದಾರೆ ಎಂದು ಅವರು ಹೇಳಿದರು .

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಟೇಲ್ ಶಿವಪ್ಪ ಅವರು ಮಾತನಾಡಿ ಸಮಾಜದಲ್ಲಿನ ಮೇಲು ಕೀಳು ವ್ಯವಸ್ಥೆ ವಿರುದ್ದ ಶತಮಾನಗಳ ಹಿಂದೆಯೇ ಕನಕದಾಸರು ಧ್ವನಿ ಎತ್ತಿದವರು.

ಬಸವಣ್ಣನವರ ತತ್ವ ಸಿದ್ದಾಂತ ಗಳಂತೆ ಕನಕದಾಸರೂ ಸಹ ಸಾಮಾಜಿಕ‌ ಅಸಮಾನತೆಗಳ ವಿರುದ್ದ ಅರಿವು ಮಾಡಿಸಿದ್ದಾರೆ ಎಂದರು .

ಎಲ್ಲಾ ಮಹಾನಾಯಕರನ್ನು ಕೇವಲ ಒಂದೊಂದು ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮುದಾಯಗಲೂ ಅವರ ಮೌಲ್ಯಗಳನ್ನು ಅರಿತು ಪಾಲನೆ ಮಾಡಬೇಕು ಎಂದು ಪಟೇಲ್ ಶಿವಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ‌ ಮಾತನಾಡಿದ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸುದರ್ಶನ್ ಅವರು ಕನಕದಾಸರ ಜೀವನ, ಸಾಹಿತ್ಯ ಶ್ರೇಷ್ಠತೆ , ಆದರ್ಶ, ಭಕ್ತಿ ಮಾರ್ಗ ದಲ್ಲಿ ಕಂಡ ಸತ್ಯಗಳು, ಸಾಮಾಜಿಕ ಪರಿವರ್ತನೆಗೆ ಮಾಡಿದ ಪ್ರಯತ್ನಗಳು ಮತ್ತು ಅವರ ಕೊಡುಗೆಗಳ ಬಗ್ಗೆ ವಿವರಿಸಿದರು.

ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ ವಿರುದ್ದ ಧ್ವನಿ ಎತ್ತಿ ಸಮಾಜ ಸುಧಾರಣೆಗೆ ಕನಕದಾಸರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಅಪರ ಪೋಲಿಸ್ ವರಿಷ್ಠಾಧಿಕಾರಿ ನಂದಿನಿ , ಉಪ ವಿಭಾಗಾಧಿಕಾರಿ ಬಿ .ಎ ಜಗದೀಶ್ ,ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಸಿದ್ದೇಗೌಡ ಸ್ವಾತಂತ್ರ್ಯ ಹೋರಾಟಗಾರಾದ ಹೆಚ್.ಎಂ ಶಿವಣ್ಣ,ಸರ್ಕಾರಿ ‌ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ ,ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನಿಂಗೇಗೌಡ,ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here