ಹಾಸನ : ನಗರದ ಹೊರವಲಯದ ದೊಡ್ಡಮಂಡಿನಹಳ್ಳಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಪತಿ ಹಾಗೂ ಮನೆಯವರು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತಳ ಸಂಬಂಧಿಕರು ಆತನ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ಸೋಮವಾರ ನಡೆಸಿದರು. ತೇಜಸ್ವಿನಿ (28) ಮೃತ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾಗಿದ್ದು, ಇದು
ಆತ್ಮಹತ್ಯೆಯಲ್ಲ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ದೂರಿದರು. “ಕ್ರಿಕೆಟ್ ಬೆಟ್ಟಿಂಗ್ಗೆ ದಾಸನಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದ ಪತಿ ಮಧು ಅಲಿಯಾಸ್ ಮಂಜುನಾಥ್, ಬೆಟ್ಟಿಂಗ್ ಸಾಲ ತೀರಿಸಲು ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ” ಎಂದು ಆರೋಪಿಸಿದರು. ”ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಲು ಸುಮಾರು 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದನಂತೆ. ಇದನ್ನು ತೇಜಸ್ವಿನಿ ಪ್ರಶ್ನೆ ಮಾಡಿದ್ದಕ್ಕೆ
ಜೀವ ತೆಗೆದಿದ್ದಾನೆ” ಎಂದು ದೂರಿದರು. ”ಮಧು ವಿರುದ್ಧ ಕ್ರಮ ಜರುಗಿಸಬೇಕು, ಎಂದು ಆಗ್ರಹಿಸಿ ಮೃತಳ ಕುಟುಂಬಸ್ಥರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು. ನಂತರ ಎಲ್ಲರ ಮನವೊಲಿಸಿ ಅಂತ್ಯಕ್ರಿಯೆ ನಡೆಸಲಾಯಿತು ,ಇದು ಕ್ರಿಕೆಟ್ ಬೆಟ್ಟಿಂಗ್ ಪ್ರಶ್ನಿಸಿದ್ದಕ್ಕೆ ಕೊಲೆ?:. , ಆರೋಪ: ‘ನಮ್ಮ ಮಗಳನ್ನು 7 ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆ ವೇಳೆ 150 ಗ್ರಾಂ ಚಿನ್ನ ಮತ್ತು ಹಣವನ್ನೂ ನೀಡಲಾಗಿತ್ತು. ಆದರೂ ತನ್ನ ಕೆಟ್ಟ ಚಾಳಿಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಂಜುನಾಥ್ ಮತ್ತು ಆತನ ಮನೆಯವರು ಕಿರುಕುಳ ಆರಂಭಿಸಿದ್ದರು. ಆರಂಭದಿಂದಲೂ ಮಗಳಿಗೆ ಹಿಂಸೆನೀಡುತ್ತಿದ್ದರು. ಇದೇ ವಿಚಾರವಾಗಿ ಅನೇಕ ಬಾರಿ ನನ್ನ ತಮ್ಮಂದಿರು ಹಾಗೂ ಗ್ರಾಮಸ್ಥರು ಸೇರಿ ರಾಜಿ ಮಾಡಿಸಿ, ಮಹಿಳಾ ಠಾಣೆಗೂ ದೂರು ನೀಡಲಾಗಿತ್ತು. ನಂತರ
ಪೊಲೀಸರು ತಿಳಿವಳಿಕೆ ನೀಡಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ 80 ಸಾವಿರ ಸಂಬಳ ಪಡೆಯುತ್ತಿದ್ದ. ಆದರೆ ಬೆಟ್ಟಿಂಗ್ಗೆ ದಾಸನಾಗಿ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದ. ಬೆಂಗಳೂರಿನಿಂದ ಹಾಸನಕ್ಕೆ ಬಂದು ಮಗಳಿಗೆ ತೊಂದರೆ ಕೊಡುತ್ತಿದ್ದ” ಎಂದು ಮೃತರ ತಾಯಿ ಲಲಿತಾ ಆರೋಪಿಸಿದರು.
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಮಂಜುನಾಥ್ ನನ್ನು ವಶಕ್ಕೆ ಪಡೆದಿದ್ದಾರೆ.