ಮೈಸೂರು: ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ..
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಕಾರ್ಯಕ್ರಮ ಇಂದು ಅರಮನೆ ಆವರಣದಲ್ಲಿ ಸಂಪ್ರದಾಯಕವಾಗಿ ಜರುಗಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ದ್ವಾರದ ಬಳಿ ಸಂಜೆ 4.36 ರಿಂದ 4.46 ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಎರಡನೇ ಬಾರಿಗೆ ಹೊತ್ತ ಅಭಿಮನ್ಯು, ಕಾವೇರಿ ಹಾಗೂ ಚೈತ್ರ ಜೊತೆಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಸಂಜೆ 5.23ಕ್ಕೆ ವಿಶೇಷ ವೇದಿಕೆಗೆ ಬಂದಿತು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು.
ನಾದಸ್ವರ ಮತ್ತು ಸ್ಯಾಕ್ಸೋಫೋನ್ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರು. ನಾದಸ್ವರ, ವೀರಗಾಸೆ, ಚೆಂಡೆ ಮೇಳ, ಮರ ಗಾಲು ವೇಷ, ಚಿಲಿಪಿಲಿ ಗೊಂಬೆ ಕಲಾವಿದರು ಪ್ರದರ್ಶನ ನೀಡುತ್ತಾ ಎಲ್ಲರನ್ನು ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಬಗಧಿ ಗೌತನಮ್, ಪ್ರತಾಪ್ ಸಿಂಹ, ಮೈಸೂರು ಮೇಯರ್ ಇತರರು ಉಪಸ್ಥಿತರಿದ್ದರು.
ವರದಿ: ಅಜೇಯ್ ಕೌಶಿಕ್ ಮೈಸೂರು