ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು, ನಾಳೆ (ಏಪ್ರಿಲ್ 21) ಯಿಂದ ಮೇ 4 ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಪ್ಯೂ ಜಾರಿಯಾಗಲಿದೆ. ಆದರೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ರವರೆಗೆ ಕರ್ಪ್ಯೂ ಇರಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಇನ್ನು ಎಲ್ಲ ಖಾಸಗಿ ಕಂಪನಿಗಳು ವರ್ಕ್ ಫ್ರಂ ಹೋಂ ನೀಡಬೇಕು ಎಂದು ತಿಳಿಸಲಾಗಿದ್ದು, ಶಾಲಾ-ಕಾಲೇಜುಗಳು ಸೇರಿ ಶಿಕ್ಷಣ ಸಂಸ್ಥೆಗಳು ಇನ್ನು ಏಳುದಿನ ಬಂದ್ ಇರಲಿವೆ. ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮನೋರಂಜನಾ ಪಾರ್ಕ್, ಸ್ವಿಮ್ಮಿಂಗ್ ಪೂಲ್, ಬಾರ್ ಆಡಿಟೋರಿಯಂ, ಮಸೀದಿ, ಮಂದಿರ, ಚರ್ಚ್ಗಳನ್ನು ಬಂದ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಇನ್ನು ದೇವಸ್ಥಾನಗಳಲ್ಲಿ ಅರ್ಚಕರು ಪೂಜೆ ಮಾಡಬಹುದಾಗಿದ್ದು, ಭಕ್ತರು ತೆರಳುವಂತಿಲ್ಲ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಗಳು ಓಪನ್ ಇರಲಿದ್ದು, ಕೊವಿಡ್ 19 ನಿಯಂತ್ರಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬಸ್ಗಳಲ್ಲಿ ಶೇ.50 ರಷ್ಟು ಮಾತ್ರ ಅವಕಾಶ ಇರಲಿದೆ.
ಒಳಾಂಗಣವಿರಲಿ, ಹೊರಾಂಗಣವಿರಲಿ ಮದುವೆಗೆ 50 ಜನರು, ಶವಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ, ಏಪ್ರಿಲ್ 23 ರ ನಂತರ ಮಾರುಕಟ್ಟೆಗಳು ಸ್ಥಳಾಂತರಗೊಳ್ಳಲಿವೆ ಎಂದು ರವಿಕುಮಾರ್ ತಿಳಿಸಿದ್ದಾರೆ. ಹಾಗೇ ಅಗತ್ಯವಸ್ತುಗಳ ಪೂರೈಕೆ ಇರುತ್ತದೆ. ಪ್ರತಿ ವೀಕೆಂಡ್ನಲ್ಲಿ ಅಂದರೆ ಶನಿವಾರ-ಭಾನುವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಣ್ಣು ತರಕಾರಿ, ಇತರ ವಸ್ತುಗಳು ಸಿಗಲಿವೆ.
ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಎಂಆರ್ಪಿ ಸೆಂಟರ್ಗಳಲ್ಲಿ ಪಾರ್ಸೆಲ್ಗೆ ಅವಕಾಶವಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಗೆ ಯಾವುದೇ ಅಡ್ಡಿಯಿಲ್ಲ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟು ದಿನ ರಾತ್ರಿ 10 ಗಂಟೆಯಿಂದ ನೈಟ್ ಕರ್ಪ್ಯೂ ಜಾರಿಯಲ್ಲಿತ್ತು.