ಕೃಷಿ ಅಭಿಯಾನ 2022-23
ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ
ಹಾಸನ / ಆಲೂರು : ಕೃಷಿಯನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡಲು ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ರೈತರು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಇದರ ಜೊತೆಗೆ ಕೃಷಿ ಪೂರಕವಾದ ತೋಟಗಾರಿಕೆ ಬೆಳೆಗಳು, ಪಶುಸಂಗೋಪನೆ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಕೆ.ಕುಮಾರಸ್ವಾಮಿ ರವರು ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ 2022-23 ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕರು ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯವಿರುವ ಹೊಸ ತಂತ್ರಜ್ಞಾನಗಳಾದ ಮಣ್ಣು ಪರೀಕ್ಷೆ ಆದಾರಿತ ರಸಗೊಬ್ಬರ ನೀಡುವಿಕೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ. ಕೃಷಿಯಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ಆಗುವ ಬೆಳೆ ನಷ್ಟ ಭರಿಸಲು ರೈತರುಗಳು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲು ಸಲಹೆ ನೀಡಿದರು. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಾವೇ ಮೊಬೈಲ್ ಆಪ್ ಮುಖಾಂತರ ಕೃಷಿ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಸಲಹೆ ನೀಡಿ, ಈ ಕೃಷಿ ಅಭೀಯಾನ ಕಾರ್ಯಕ್ರದ ಸಮಗ್ರ ಕೃಷಿ ಮಾಹಿತಿಯನ್ನು ಯಶಸ್ವಿಯಾಗಿ ರೈತರಿಗೆ ತಲುಪಿಸಲು ಪ್ರತಿ ಗ್ರಾಮ ಪಂಚಾಯ್ತಿಗೆ ಕಡ್ಡಾಯವಾಗಿ ಭೇಟಿ ನೀಡಲು ಸೂಚಿಸಿದರು.
![](https://hassananews.com/wp-content/uploads/2022/06/IMG-20220620-WA0054-1024x576.jpg)
ಆಲೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ, ಶ್ರೀ ಮನು ಎಂ.ಡಿ. ರವರು ಮಾತನಾಡಿ ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥವು ಪ್ರತಿ ಹೋಬಳಿಗಳಲ್ಲಿ 3 ದಿನಗಳಂತೆ ಒಟ್ಟಾರೆ 12 ದಿನಗಳ ಕಾಲ ತಾಲ್ಲೂಕಿನಾದ್ಯಂತ ಸಂಚರಿಸಿ ರೈತರುಗಳಿಗೆ ಮಾಹಿತಿ ನೀಡಲಾಗುವುದು ಹಾಗೂ ಈ ತಿಂಗಳ ದಿನಾಂಕ 20 ರಿಂದ 22 ರವರೆಗೆ ಕೆ.ಹೊಸಕೋಟೆ ಹೋಬಳಿ, ದಿನಾಂಕ 23 ರಿಂದ 25 ರವರೆಗೆ ಕುಂದೂರು ಹೋಬಳಿ, ದಿನಾಂಕ 26 ರಿಂದ 28 ರವರೆಗೆ ಪಾಳ್ಯ ಹೋಬಳಿ ಹಾಗೂ ದಿನಾಂಕ 29 ರಿಂದ ಜುಲೈ 1 ರವರೆಗೆ ಕಸಬಾ ಹೋಬಳಿಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಂಜೇಗೌಡರು, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರು, ಕೆ.ಹೊಸಕೋಟೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಕೇಶವರವರು, ಕೃಷಿ ಇಲಾಖೆ ಅಧಿಕಾರಿಗಳಾದ ಶ್ರೀ ಡಿ.ಕೆ.ಯೋಗಾನಂದ, ಶ್ರೀ ಮೋಹನಕುಮಾರ್, ಶ್ರೀ ಮಹಾಂತೇಶ್ ಸೊರಟೂರ್, ಕುಮಾರಿ ಲಕ್ಷ್ಮೀ, ಶ್ರೀಮತಿ ಸಂಗೀತ ಹಾಗು ಸಿಬ್ಬಂದಿಗಳು ಹಾಜರಿದ್ದರು.