ಮಗನಿಗೆ ರಕ್ಷಣೆ ಕೊಡಿಸುವಂತೆ ಪೋಷಕರಿಂದ ಡಿಸಿಗೆ ಮನವಿ
ಹೊರಗೆ ಬಂದಾಗ ನಿಂತಲ್ಲೆ ಕುಸಿದು ಬಿದ್ದು ಅಸ್ವಸ್ಥರಾದ ಗಗನ್ ತಾಯಿ ಸುಜಾತ
ಹಾಸನ : ಉಕ್ರೇನ್ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿ ಗಗನ್ ಗೆ ಸೂಕ್ತ ರಕ್ಷಣೆ ನೀಡಿ, ಊಟ ಕೊಡಿಸುವಂತೆ ಪೋಷಕರು ಡಿಸಿ ಬಳಿ ಮನವಿ ಮಾಡಿದ ನಂತರ ಹೊರ ಬಂದಾಗ ತಾಯಿ ಸುಜಾತ ಎಂಬುವರು ಆತಂಕದಲ್ಲಿ ದುಃಖ ತಡೆಯಲಾರದೆ ನಿಂತಲ್ಲೆ ಕೆಳಗೆ ಕುಸಿದು ಬಿದ್ದು ಅಸ್ವಸ್ಥರಾದ ಘಟನೆ ಗುರುವಾರ ಮದ್ಯಾಹ್ನ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆದಿದೆ.
ತಂದೆ ಕೇಶವಮೂರ್ತಿ ಮತ್ತು ತಾಯಿ ಸುಜಾತ ಅವರು ಜಿಲ್ಲಾಧಿಕಾರಿಗಳ ಬಳಿ ಮಾತನಾಡುತ್ತಾ, ನನ್ನ ಮಗನಾದ ಗಗನ್ಗೌಡ ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿದ್ದು, ಯುದ್ಧ ನಡೆಯುತ್ತಿರುವ ಹಿನ್ನಲೆಯಲ್ಲಿ ಈಗ ನಮ್ಮ ಮಗ ತುಂಬಾ ಕಷ್ಟದಲ್ಲಿ ಸಿಲುಕಿದ್ದಾನೆ. ಹೊಟ್ಟೆಗೆ ಊಟವಿಲ್ಲದೆ ನೀರು ಕುಡಿದುಕೊಂಡೆ ೪೦ ಕಿ.ಮಿ. ದೂರ ಯುದ್ಧಭೂಮಿಯಲ್ಲಿ ನಡೆದಿದ್ದಾನೆ. ಭಯದಲ್ಲಿದ್ದು, ನಾನು ಸಾಯುವ ಸ್ಥಿತಿಯಲ್ಲಿದ್ದೇನೆ ಎಂದು ನೋವು ತೋಡಿಕೊಳ್ಳುತ್ತಿದ್ದಾನೆ.
ನನ್ನ ಮಗನಿಗೆ ಊಟ, ರಕ್ಷಣೆ ಕೊಡಿಸುವಂತೆ ಜಿಲ್ಲಾಧಿಕಾರಿಗಳ ಬಳಿ ಕೋರುತ್ತಿದ್ದೇನೆ. ಭಾರತೀಯರಿಗೆ ಉಕ್ರೇನ್ನಿಂದ ಹೊರಬರಲು ಅವಕಾಶ ನೀಡುತ್ತಿಲ್ಲ. ಉಕ್ರೇನಿಯನ್ನರು ಕೇವಲಗಡಿ ದಾಟಲು ಮಾತ್ರ ಅವಕಾಶ ಮಾಡುತ್ತಿದ್ದಾರೆ. ಈ ಕ್ರಮದಿಂದ ನಮ್ಮ ಮಕ್ಕಳು ಅಲ್ಲೇ ಉಳಿಯುವ ಪರಿಸ್ಥಿತಿ ಎದುರಾಗಿದೆ. ಈ ಘಟನೆಯನ್ನು ಒಪ್ಪಿಕೊಂಡ ಹಾಸನ ಜಿಲ್ಲಾಧಿಕಾರಿ ಅವರು, ಭಾರತೀಯ ವಿದ್ಯಾರ್ಥಿಗಳಿಗೆ ಹೊರಬರಲು ಅವಕಾಶ ಕೊಡುತ್ತಿಲ್ಲ ಎಂದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ ಎಂದರು. ಭಾರತೀಯರಿಗೆ ಕಾಲಲ್ಲಿ ಒದ್ದು ಹಲ್ಲೆ ಮಾಡುತ್ತಿದ್ದಾರಂತೆ.
ಭಾರತೀಯರ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಗಗನ್ ಪೋಷಕರ ದುಃಖದಲ್ಲಿ ಅಳಲು ತೋಡಿಕೊಂಡರು. ಈ ಬಗ್ಗೆಯೂ ಸ್ಪಷ್ಟನೆ ಕೊಟ್ಟ ಹಾಸನ ಡಿಸಿಯವರು, ಅಲ್ಲಿನ ಪರಿಸ್ಥಿತಿ ಬಗ್ಗೆ ಕೇಳಿ ತಿಳಿದಿದ್ದು, ಮಹಿಳೆಯರನ್ನು ಹೊರ ಕಳಿಸಿ ಪುರುಷರ ಕೈಗೆ ಬಂದೂಕು ಕೊಡುತ್ತಿದ್ದಾರೆ. ಎಂದು ತಿಳಿದಿದೆ. ಸ್ಟ್ರೀಟ್ ವಾರ ಕೂಡ ನಡೆಯುವ ಮುನ್ಸೂಚನೆ ಇದೆ. ಯುದ್ಧ ನಡೆಯುತ್ತಿರೋದ್ರಿಂದ ಇಂತಹ ಘಟನೆಗಳು ನಡೆಯುವುದು ಸಹಜವಾಗಿದೆ. ಕೆಲವೊಂದು ಸಂದರ್ಭವನ್ನ ಅನುಸರಿಸಿಕೊಳ್ಳಬೇಕು.
ಈ ಎಲ್ಲಾ ಬಗ್ಗೆಯೂ ಪತ್ರ ಬರೆಯುವುದಾಗಿ ಭರವಸೆಯ ಮಾತನಾಡಿದರು.
ಉಕ್ರೇನ್ ನಲ್ಲಿ ಸಿಲುಕಿರುವ ಹಾಸನದ ಗಗನ್ಗೌಡ ನನ್ನು ಕ್ಷೇಮವಾಗಿ ಕರೆಸಿಕೊಳ್ಳುವಂತೆ ಪೋಷಕರು ಮನವಿ ಮಾಡಿ ಜಿಲ್ಲಾಧಿಕಾರಿ ಕಛೇರಿಯಿಂದ ಆವರಣಕ್ಕೆ ಬಂದಾಗ ಗಗನ್ ತಾಯಿ ಸುಜಾತ ಅವರು ದುಃಖ ತಡೆಯಲಾರದೆ ಕೆಳಗೆ ಕುಸಿದು ಬಿದ್ದು ಅಸ್ವಸ್ಥರಾದರು. ತಕ್ಷಣದಲ್ಲಿ ಆಕೆಯ ಮುಖದ ಮೇಲೆ ನೀರು ಎರಚಿ ಪ್ರಜ್ಞೆ ಭರಿಸಿದರು.
ನನ್ನ ಮಗ ಗಗನ್ ಗೌಡನ್ನು ಈಗಲೆ ಕರೆ ತನ್ನಿ ಎಂದು ಕಳೆಗೆ ಬಿದ್ದಾಗ ಕನವರಿಕೆಯನ್ನು ತಾಯಿ ಮಾಡುತ್ತಿದ್ದು, ನಂತರ ಒಂದು ಆಟೋ ಹಿಡಿದು ಕರೆದೊಯ್ದರು.