6 ತಾಲೂಕುಗಳ ಪ್ರೌಢಶಾಲೆವರೆಗೆ ರಜೆ
ಕಾಲೇಜು ನಿರ್ಧಾರ ಪ್ರಾಂಶುಪಾಲರಿಗೆ
ಹಾಸನ: ಕರ್ನಾಟಕ ಬಂದ್ ಹಿನ್ನೆಲೆ ಶುಕ್ರವಾರ ಜಿಲ್ಲೆಯ ಆರು ತಾಲೂಕುಗಳಲ್ಲಿ 1 ರಿಂದ 10ನೇ ತರಗತಿವರೆಗೆ ಖಾಸಗಿ,ಅನುದಾನ
ರಹಿತ ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ, ಅರಕಲಗೂಡು, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ, ಆಲೂರು ಬಿಇಒಗಳು ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಆದರೆ ಅರಸೀಕೆರೆ ಮತ್ತು
ಹೊಳೆನರಸೀಪುರ ತಾಲೂಕಿನಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಬಂದ್ಗೆ ಕರೆ ನೀಡಿರುವವರಿಂದ ಶಾಲೆಗಳಿಗೆ ರಜೆ ನೀಡುವಂತೆ ಒತ್ತಾಯ ಬಂದರೆ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಮ್ಮ ಹಂತದಲ್ಲೇ ರಜೆ ಘೋಷಿಸಿ ಸದರಿ ದಿನದ ಶಾಲೆಯನ್ನು ಬೇರೆ ದಿನದಂದು ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಆಡಳಿತ) ಜವರೇಗೌಡ ತಿಳಿಸಿದ್ದಾರೆ.
ಪ್ರಾಂಶುಪಾಲರಿಗೆ ಅಧಿಕಾರ: ಹಾಗೆಯೇ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳನ್ನು ಶುಕ್ರವಾರ ಬಂದ್ ಮಾಡುವಂತೆ ಒತ್ತಾಯ ಬಂದಲ್ಲಿ
ತಮ್ಮ ಹಂತದಲ್ಲಿಯೇ ಕಾಲೇಜುಗಳಿಗೆ ರಜೆ ನೀಡಿ ಆ ದಿನದ ಕಾರ್ಯಭಾರವನ್ನು ಮುಂಬರುವ ಯಾವುದಾದರೂ ರಜೆ ದಿನದಂದು ಸರಿದೂಗಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಿ.ಎಂ. ಮಹಾಲಿಂಗಯ್ಯ ಅವರು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.