ಮಹಿಳಾ ಪೇದೆ ಕೊಲೆ ಹಿಂದೆ ಲವ್‌ ಕಹಾನಿ ಪ್ರಿಯಕರನ ಪಡೆಯಲು ಸಹೋದ್ಯೋಗಿಯಿಂದಲೇ ಸುಧಾ ಹತ್ಯೆ: ಇಬ್ಬರು ಅರೆಸ್ಟ್

0

ಹಾಸನ / ತುಮಕೂರು: ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಸುಧಾ ಹತ್ಯೆಗೆ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನಿಗಾಗಿ ಅದೇ ಠಾಣೆಯ ಇನ್ನೋರ್ವ ಮಹಿಳಾ ಪೇದೆ ಸಂಚು ರೂಪಿಸಿ ಕೊಲೆ ಮಾಡಿಸಿರುವುದು ಬಯಲಾಗಿದೆ.
ಹತ್ಯೆಗೆ ಸಂಬಂಧಿಸಿದ ಹುಳಿಯಾರು ಠಾಣೆ ಪೇದೆ ರಾಣಿ ಮತ್ತು ಸುಧಾಳ ಸಹೋದರನ ಸ್ನೇಹಿತ ನಿಖೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಸುಧಾ ಮತ್ತು ಆರೋಪಿ ರಾಣಿ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದವರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಪೊಲೀಸ್‌ನನ್ನು ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೇಳು ತಿಂಗಳಿಂದ ಸುಧಾ ಮತ್ತು ರಾಣಿ ನಡುವೆ ಜಗಳ ನಡೆಯುತ್ತಿತ್ತು. ಕೆಲ ಸಲ ಠಾಣೆಯಲ್ಲೇ ಗಲಾಟೆ ಮಾಡಿಕೊಂಡಿದ್ದರು. ನಂತರ ಸುಧಾಳನ್ನು ಕೊಲೆ ಮಾಡಿದರೆ ಪ್ರಿಯತಮ ನನಗೇ ಸಿಗುತ್ತಾನೆಂದು ರಾಣಿ ಸಂಚು ರೂಪಿಸಿದ್ದಾಳೆಂದು ತಿಳಿದು ಬಂದಿದೆ.

ಸ್ಕೆಚ್ ಜಸ್ಟ್ ಮಿಸ್:

ಸುಧಾಳನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿದ್ದ ರಾಣಿ, ಈ ಮೊದಲೇ ಒಮ್ಮೆ ಸಂಚು ರೂಪಿಸಿದ್ದಳಂತೆ. ಸುಧಾಳ ಚಿಕ್ಕಪ್ಪನ ಮಗ ಮಂಜುನಾಥ್ ಮತ್ತು ಆತನ ಸ್ನೇಹಿತ ನಿಖೇಶ್ ಜತೆ ಸೇರಿ ಸ್ಕೆಚ್ ಹಾಕಿದ್ದಳು.
ಸೆ.4 ರಂದು ಶಿವಮೊಗ್ಗದಲ್ಲಿ ಓದುತ್ತಿದ್ದ ಸುಧಾಳ ಮಗನನ್ನು ನೋಡಿಕೊಂಡು ಬರುವ ನೆಪದಲ್ಲಿ ಮಂಜುನಾಥ್ ಹಾಗೂ ನಿಖೇಶ್ ಸುಧಾಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.
ಶಿವಮೊಗ್ಗದಿಂದ ವಾಪಸ್ಸು ಬರುವಾಗ ಸುಧಾ ಕೊಲೆಗೆ ಸಂಚು ಮಾಡಿದ್ದರು. ಆದರೆ, ಆ ವೇಳೆ ಮಕ್ಕಳಿಬ್ಬರು ಜತೆಯಲ್ಲಿ ಇದ್ದುದರಿಂದ ಸುಧಾ ಬಚಾವಾಗಿದ್ದರು.
2ನೇ ಬಾರಿಗೆ ಕೊಲೆ:
ತನ್ನ ಸ್ಕೆಚ್ ಮಿಸ್ ಆಗಿದ್ದಕ್ಕೆ ರಾಣಿ ಗರಂ ಆಗಿದ್ದಳು ಎನ್ನಲಾಗಿದ್ದಳು. ಏನ್ ಮಾಡ್ತಿರೋ ನನಗೆ ಗೊತ್ತಿಲ್ಲ. ಅವಳನ್ನು ಈ ವಾರದಲ್ಲೇ ಮುಗಿಸಬೇಕು ಎಂದು ಹಠ ಹಿಡಿದು ಆಕೆಯೇ ಮತ್ತೊಂದು ಸಂಚು ರೂಪಿಸಿದ್ದಳು.
ಆ ಪ್ರಕಾರ ಸುಧಾಳನ್ನು ಸೆ.13 ರಂದು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ನಿಖೇಶ್ ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಮಾರ್ಗ ಮಧ್ಯೆ ತಿಪಟೂರಿನ ಹಾಸನ ವೃತ್ತದಲ್ಲಿ ಮಂಜುನಾಥ್ ಕಾರ್ ಏರಿದ್ದ. ಸುಧಾ ಕಣ್ಣಿಗೆ ಸ್ಪ್ರೆ ಮಾಡಿ ಆಕೆ ಕಣ್ಣು ಉಜ್ಜಿಕೊಳ್ಳುವಷ್ಟರಲ್ಲಿ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ವೇಲ್‌ನಿಂದ ಕಾರಿನಲ್ಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು.
ಸುಳಿವು ಸಿಗದಂತೆ ತಿಪಟೂರು-ಅರಸೀಕೆರೆ ಮಾರ್ಗ ಮಧ್ಯದ ಪೊದೆಯೊಂದಕ್ಕೆ ಶವ ಎಸೆದು ಪರಾರಿಯಾಗಿದ್ದರು.

ಶಿವಮೊಗ್ಗದಲ್ಲಿ ಮಂಜುನಾಥ್ ಆತ್ಮಹತ್ಯೆ:

ಸುಧಾಳನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಹಾಗೂ ಸುಧಾಳ ಸಹೋದರ ಮಂಜುನಾಥ್, ಶಿವಮೊಗ್ಗದ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಬರೆದಿಟ್ಟ 13 ಪುಟಗಳ ಡೆತ್‌ನೋಟ್‌ನಲ್ಲಿ ಅಕ್ಕನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಮರು ದಿನ ಸುಧಾಳ ಶವ ಪತ್ತೆಯಾಗಿತ್ತು. ಪ್ರಕರಣ ಬೇಧಿಸಿರುವ ಪೊಲೀಸರು ರಾಣಿ ಮತ್ತು ನಿಖೇಶ್‌ನನ್ನು ಬಂಧಿಸಿ ತನಿಖೆಗೆ ಒಳ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here