ಅರಸೀಕೆರೆ : ಶಾಸಕ ಕೆ.ಎಂ ಶಿವಲಿಂಗೇಗೌಡರ ವಿರುದ್ಧ ಆರೋಪ ಮಾಡುತ್ತಾ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡ ಎನ್.ಆರ್ ಸಂತೋಷ್ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶಿವಲಿಂಗೇಗೌಡರ ಅಭಿಮಾನಿಗಳು ಕರೆ ನೀಡಿದ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಮಾವೇಶ ಶಿವಲಿಂಗೇಗೌಡರ ಅಭಿಮಾನಿಗಳ ವಿರಾಟ ದರ್ಶನಕ್ಕೆ ಅರಸೀಕೆರೆ ನಗರ ಸಾಕ್ಷಿ ಆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶದಲ್ಲಿ ರೈತ ಸಂಘ,ಕನ್ನಡಪರ ಸಂಘಟನೆಗಳು,ಸೇರಿದಂತೆ ಪ್ರಗತಿಪರ ಸಂಘಟನೆಗಳು ಮತ್ತು ಸ್ತ್ರೀ ಸಂಘದ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಸಾವಿರಾರು ಸಂಖ್ಯೆಯಲ್ಲಿ ನಗರದ ಹಾಸನ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಮುಂಭಾಗ ಸೇರಿದ ಕೆಎಂಎಸ್ ಅಭಿಮಾನಿಗಳು ಶಾಸಕ ಶಿವಲಿಂಗೇಗೌಡರ ಪರ ಹಾಗೂ ಎನ್.ಆರ್ ಸಂತೋಷ್ ವಿರುದ್ಧ ಘೋಷಣೆ ಕೂಗುತ್ತಾ ಅಂಬೇಡ್ಕರ್ ವೃತ್ತ ಬಳಸಿಕೊಂಡು ರಾಷ್ಟ್ರೀಯ ದಾರಿ 206 ಟಿಎಚ್ ರಸ್ತೆ ಮೂಲಕ ಸಮಾವೇಶ ನಡೆಯುವ ಸ್ಥಳ ಸೇರಿದರು.ಪ್ರತಿಭಟನೆಗೆ ಕರೆ ನೀಡಿದ್ದ ಸಮಿತಿಯ ಅಧ್ಯಕ್ಷ ಬಿಳಿ ಚೌಡಯ್ಯ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಶಿವಲಿಂಗೇಗೌಡರ ಕೊಡುಗೆ ಅಪಾರವಾಗಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿಯಾಗಿದೆ ಇದನ್ನು ಅರಿಯದ ಬಿಜೆಪಿ ಮುಖಂಡ ಸಂತೋಷ್ ನಮ್ಮ ಶಾಸಕರ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುತ್ತಾ ಕ್ಷೇತ್ರದಲ್ಲಿ ಗಲಾಟೆ ಗದ್ದಲಗಳನ್ನು ಮಾಡಿಸುತ್ತಾ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ರಾಜಕೀಯವಾಗಿ ಬೆಳೆಯಬೇಕಾದರೆ ಸಂತೋಷ್ ಅವರು ತಮ್ಮ ನಡೆನುಡಿಯನ್ನು ಇನ್ನಾದರೂ ಬದಲಿಸಿಕೊಳ್ಳುವಂತೆ ಹೇಳಿದರು.
![](https://hassananews.com/wp-content/uploads/2022/08/FB_IMG_1661161138106-1024x576.jpg)
ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ ರಾಜಕೀಯವಾಗಿ ನೀವು ನೀಡಿದ ಶಕ್ತಿಯನ್ನು ನಿಮ್ಮ ಸೇವೆಗೆ ಬಳಸಿಕೊಂಡಿದ್ದೇನೆ ಆದರೆ ಇತ್ತೀಚಿಗೆ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಬಿಜೆಪಿ ಮುಖಂಡನೊಬ್ಬ ಶಿವಲಿಂಗೇಗೌಡ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ ಭ್ರಷ್ಟಾಚಾರ ಮಾತ್ರ ನಡೆದಿದೆ ರಾಗಿ ಕಳ್ಳ ಹೀಗೆ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ನನ್ನ ವಿರುದ್ಧ ನೀಡಿರುವ ಹೇಳಿಕೆ ಹಾಗೂ ಹಾಡಿರುವ ಮಾತುಗಳು ನಿಜಕ್ಕೂ ನನ್ನ ಮನಸ್ಸಿಗೆ ನೋವು ತಂದಿದ್ದು ಇಂತಹ ಸಂದರ್ಭದಲ್ಲಿ ಕ್ಷೇತ್ರದ ಮಹಾಜನತೆ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮತ್ತು ಇತರೆ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಹಾಗೂ ನನ್ನ ನೆಚ್ಚಿನ ಕಾರ್ಯಕರ್ತ ಬಂಧುಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ನನ್ನ ಬೆಂಬಲಕ್ಕೆ ನಿಲ್ಲುವುದರೊಂದಿಗೆ ನನ್ನ ರಾಜಕೀಯ ವಿರೋಧಿಗಳಿಗೆ ನೀಡಿರುವ ಪ್ರತಿಕ್ರಿಯೆಯಿಂದ ನನ್ನ ಎದೆ ತುಂಬಿ ಬಂದಿದೆ ಎಂದು ಭಾವುಕರಾಗಿ ನುಡಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಸಮಿವುಲ್ಲಾ.ನಗರಸಭೆ ಉಪಾಧ್ಯಕ್ಷ ಕಾಂತೇಶ್. ತಾಪಂ ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ.ಜಿಲ್ಲಾ ರೈತ ಸಂಘದ ಸಂಚಾಲಕ ಬೋರನಕೊಪ್ಪಲು ಶಿವಲಿಂಗಪ್ಪ.ಜಿಪಂ ಮಾಜಿ ಉಪಾಧ್ಯಕ್ಷ ಬಂಡಿಗೌಡ ರಾಜಣ್ಣ.ಮುಖಂಡರಾದ ಅರುಣ್ ಕುಮಾರ್. ಧರ್ಮಶೇಖರ್.ಧರ್ಮೇಶ್.ನಗರಸಭೆ ಸದಸ್ಯರಾದ ಜಿಟಿ ಗಣೇಶ್.ಅನ್ನಪೂರ್ಣ.ಮನೋಹರ ಮೇಸ್ತ್ರಿ. ಜಾಕಿರ್.ಮುಖಂಡರಾದ ಹರಪನಹಳ್ಳಿ ಜಯಣ್ಣ. ಬೈರೇಶ್. ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್.ವೈ.ಕೆ ದೇವರಾಜ್.ಸೇರಿದಂತೆ ಶಿವಲಿಂಗೇಗೌಡರ ಬೆಂಬಲಿತ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.